ಶಿವು ಉಪ್ಪಾರ ಅನುಮಾನಸ್ಪದ ಸಾವು ಸಿಬಿಐಗೆ ಒಪ್ಪಿಸಲು ‘ಬೆಳಗಾವಿ ಚಲೋ’.

ಉಡುಪಿ:ಶಿವು ಉಪ್ಪಾರ ಅನುಮಾನಸ್ಪದ ಸಾವಿನ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ಶ್ರೀರಾಮ ಸೇನೆ ಸಂಘಟನೆಯ ನೇತೃತ್ವದಲ್ಲಿ ಕರಾವಳಿಯ ವಿವಿಧ ಮಠಾಧೀಶರು,ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ಜುಲೈ 8ರಂದು ಬೆಳಿಗ್ಗೆ 11ಗಂಟೆಗೆ ‘ಬೆಳಗಾವಿ ಚಲೋ’ ಚಳುವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು ತಿಳಿಸಿದರು .

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದಲ್ಲಿ ಜಿಲ್ಲೆಯ ಶ್ರೀರಾಮ ಸೇನೆಯ ಕಾರ್ಯಕರ್ತರು ಹಾಗೂ ಗೋಪ್ರೇಮಿಗಳು ಸೇರಿ ಒಟ್ಟು 150 ಜನ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಸತ್ಯ ಮರೆಮಾಚಲು ಯತ್ನ.

ಬೆಳಗಾವಿ ಜಿಲ್ಲೆಯ ಹಿರೇ ಬಾಗೇವಾಡಿಯಲ್ಲಿ ಮೇ 25ರಂದು ನಡೆದ ಗೋ ಪ್ರೇಮಿ ಶಿವು
ಉಪ್ಪಾರ ಅವರ ಸಾವಿನ ಪ್ರಕರಣದಲ್ಲಿ ಹಲವಾರು ಅನುಮಾನಗಳಿವೆ. ಈ ಪ್ರಕರಣವನ್ನು
ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಶಿವುಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ
ಯಾವುದೇ ಪರಿಸ್ಥಿತಿ ಇರಲಿಲ್ಲ. ಆತನಿಗೆ ಕೆಲವೊಂದು ಜೀವ ಬೆದರಿಕೆಗಳು ಬಂದಿರುವುದು
ತಿಳಿದುಬಂದಿದೆ. ಆದರೂ ಪೊಲೀಸರು ಕೊಲೆ ಪ್ರಕರಣ ದಾಖಲಿಸದೆ, ಆತ್ಮಹತ್ಯೆಯೆಂದು
ದಾಖಲಿಸಿ ಸತ್ಯವನ್ನು ಮರೆಮಾಚುವ ಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಪ್ರಮುಖ ಬೇಡಿಕೆ:

ಮೃತ ಶಿವು ಉಪ್ಪಾರನ ಮೊಬೈಲ್‌ನಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳನ್ನು ಬಂಧಿಸಿ
ವಿಚಾರಣೆಗೆ ಒಳಪಡಿಸಬೇಕು. ಮೃತ ದೂರವಾಣಿ ಕರೆಗಳ ಸಂಪೂರ್ಣ ತನಿಖೆಯಾಗಬೇಕು. ಮೃತನ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ನೀಡಬೇಕು. ಕರ್ನಾಟಕದಿಂದ ಹೊರ ರಾಜ್ಯಗಳಿಗೆ ಆಗುತ್ತಿರುವ ಗೋಮಾಂಸದ ರಫ್ತಿಗೆ ನಿಷೇಧ ಹೇರಬೇಕು. ಅನಧಿಕೃತ ಕಸಾಯಿಖಾನೆಗಳನ್ನುಕೂಡಲೇ ಮುಚ್ಚಬೇಕು ಎಂದು ಒತ್ತಾಯಿಸಿದರು.

ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ
ಆರೋಪಿ ವಿದ್ಯಾರ್ಥಿಗಳ ಪರವಾಗಿ ಯಾವುದೇ ವಕೀಲರು ವಕಾಲತ್ತು ಮಾಡಬಾರದು ಎಂದರು. ಶ್ರೀರಾಮಸೇನೆಯ ಗೌರವಾಧ್ಯಕ್ಷ ಡಿ. ರಾಧಾಕೃಷ್ಣ ಶೆಟ್ಟಿ ಮಾತನಾಡಿ, ಕರಾವಳಿ
ಜಿಲ್ಲೆಯಾದ್ಯಂತ ಎಗ್ಗಿಲ್ಲದೆ ಗೋವುಗಳ ಕಳ್ಳ ಸಾಗಾಣಿಕೆ ಆಗುತ್ತಿದೆ. ಆದರೆ ಪೊಲೀಸರು
ಹಾಗೂ ಜಿಲ್ಲಾಡಳಿತ ಇದರ ವಿರುದ್ಧ ಯಾವುದೇ ಕಾರ್ಯಾಚರಣೆ ಮಾಡದೆ, ಸುಮ್ಮನೆ ಕೈಕಟ್ಟಿ ಕುಳಿತಿದೆ.

ಮುಂದಿನ ದಿನಗಳಲ್ಲಿ ಅಕ್ರಮ ಗೋವುಗಳ ಸಾಗಾಟದ ವಿರುದ್ಧ ಕಠಿಣ
ಕ್ರಮಕೈಗೊಂಡು, ಇದರಲ್ಲಿ ಭಾಗಿಯಾಗಿರುವವರನ್ನು ಬಂಧಿಸಬೇಕು. ಇಲ್ಲದಿದ್ದರೆ ಉಗ್ರಸ್ವರೂಪದ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶರತ್‌ ಪೂಜಾರಿ ಮಣಿಪಾಲ, ಯಶವಂತ್‌ಕಲ್ಯಾಣಪುರ, ಸುನಿಲ್‌ ಶೆಟ್ಟಿ ಬೈಲೂರು, ದಿನೇಶ್‌ ಪಾಂಗಾಳ ಇದ್ದರು.

Leave a Reply

Your email address will not be published. Required fields are marked *

error: Content is protected !!