ಅಜೀರ್ಣ ನಿವಾರಣೆಗೆ ಹಿತ್ತಲ ಗಿಡವೇ ರಾಮಬಾಣ
![](https://udupitimes.com/wp-content/uploads/2019/09/19-4.jpg)
ಈಗ ತಾನೇ ಊಟ ಮಾಡಿದ ಬಳಿಕ ಹೊಟ್ಟೆ ಉಬ್ಬಿರುವಂತಾಗಿದೆಯೇ? ಸದ್ಯಕ್ಕೆ ಯಾವುದೇ ಔಷಧಿ ಮನೆಯಲಿಲ್ಲವೇ? ಔಷಧಿ ತರುವವರೆಗೂ ತಾಳಲು ಸಾಧ್ಯವಿಲ್ಲವೇ? ಆತಂಕ ಬೇಡ, ನಿಮ್ಮ ಮನೆಯ ಅಕ್ಕಪಕ್ಕದಲ್ಲಿಯೇ ಇರುವ ಈ ಸಾಮಾನ್ಯ ಗಿಡಗಳ ಎಲೆಗಳಲ್ಲಿ ಒಂದು ಬಗೆಯ ಎಲೆಗಳಲ್ಲಿ ಕೆಲವನ್ನು ಹಸಿಯಾಗಿಯೇ ಅಗಿದು ನುಂಗಿ ನೀರು ಕುಡಿಯಿರಿ
ಏನಾಶ್ಚರ್ಯ! ಔಷಧಿ ತೆಗೆದುಕೊಳ್ಳುವ ಪ್ರಮೇಯವೇ ಇಲ್ಲದೇ ಅಜೀರ್ಣದ ತೊಂದರೆ ಇಲ್ಲವಾಗುತ್ತದೆ. ಈ ಐದು ಎಲೆಗಳು ಯಾವುವು ಎಂಬ ಕುತೂಹಲ ಮೂಡಿತೇ?
ತುಳಸಿ ಎಲೆಗಳು
ಸುಮಾರು ಐದು ಆರು ತುಳಸಿ ಎಲೆಗಳನ್ನು ಚೆನ್ನಾಗಿ ತೊಳೆದು ಹಸಿಯಾಗಿದ್ದಂತೆಯೇ ಅಗಿತು ನುಂಗಿಬಿಡಿ. ಇದರಿಂದ ಆಮ್ಲೀಯತೆ, ಅಜೀರ್ಣ, ಹುಳಿತೇಗು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ. ಈ ಎಲೆಗಳ ರಸ ಜಠರ ರಸದ ಆಮ್ಲೀಯತೆಯನ್ನು ಕಡಿಮೆಗೊಳಿಸಿ ಜಠರ ಮತ್ತು ಕರುಳುಗಳ ಒಳಗೆ ಹುಣ್ಣಾಗುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಇದು ಜಠರ ರಸದ ಪ್ರಾಬಲ್ಯವನ್ನು ಕಡಿಮೆಗೊಳಿಸುತ್ತದೆ
ಪುದೀನಾ ಎಲೆಗಳು
ಹೊಟ್ಟೆಯಲ್ಲಿ ಉರಿಯನ್ನು ತಣಿಸಲು ಪುದಿನಾ ಎಲೆಗಳು ಅತ್ಯುತ್ತಮವಾಗಿವೆ. ಈ ರಸ ಹೊಟ್ಟೆಯ ರಸದ ಪ್ರಾಬಲ್ಯವನ್ನು ಕಡಿಮೆ ಮಾಡುವುದರ ಜೊತೆಗೇ ಜಠರದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಅಜೀರ್ಣ ಅಥವಾ ಹೊಟ್ಟೆಯುರಿ ಉಂಟಾದರೆ ಕೆಲವು ಪುದೀನಾ ಎಲೆಗಳನ್ನು ಹಸಿಯಾಗಿಯೇ ಅಗಿದು ನುಂಗಿಬಿಡಿ. ಇದರಿಂದ ಹೊಟ್ಟೆನೋವು ತಕ್ಷಣ ಕಡಿಮೆಯಾಗುತ್ತದೆ.ಇದಕ್ಕೂ ಉತ್ತಮ ವಿಧಾನವೆಂದರೆ ಕೆಲವು ಪುದೀನಾ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಚೆನ್ನಾಗಿ ಕುದಿಸಿ ನೀರು ಅರ್ಧವಾದ ಬಳಿಕ ಸೋಸಿ ತಣಿಸಿ ಬಾಟಲಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳುವುದು. ಹೊಟ್ಟೆನೋವು ಎದುರಾದಾಗ ಈ ನೀರನ್ನು ತಕ್ಷಣ ಕುಡಿಯುವುದು ಶೀಘ್ರವಾದ ಉಪಶಮನ ನೀಡುತ್ತದೆ.
ಕರಿಬೇವಿನ ಎಲೆಗಳು
ಹೊಟ್ಟೆನೋವಿಗೆ ಅಡುಗೆಮನೆಯ ಪ್ರಮುಖ ಸಾಂಬಾರ ಪದಾರ್ಥವಾದ ಕರಿಬೇವಿನ ಎಲೆಯೂ ಉತ್ತಮ ಪರಿಹಾರ ನೀಡುತ್ತದೆ. ಇದರ ಉರಿಶಾಮಕ ಮತ್ತು ಉರಿಯೂತ ನಿವಾರಕ ಗುಣ ಹೊಟ್ಟೆಯಲ್ಲಿ ಎದುರಾದ ಅಜೀರ್ಣವನ್ನೂ ನಿವಾರಿಸಲು ಸಮರ್ಥವಾಗಿದೆ. ಅಲ್ಲದೇ ಕೆಲವು ಕರಿಬೇವಿನ ಎಲೆಗಳನ್ನು ಊಟದೊಂದಿಗೆ ಸೇವಿಸಿದಾಗ ಮಲಬದ್ಧತೆಯಾಗದೇ ಇರಲು ನೆರವಾಗುತ್ತದೆ
ವೀಳ್ಯದ ಎಲೆ
ಒಂದು ವೇಳೆ ಊಟ ಹೆಚ್ಚಾಗಿ ಅಜೀರ್ಣವಾಗುವ ಸಾಧ್ಯತೆ ಕಂಡುಬಂದರೆ ತಕ್ಷಣ ಎಳೆಯ ವೀಳ್ಯದೆಲೆಯನ್ನು ಅಗಿದು ನುಂಗಿಬಿಡಿ. ಬಾಯಿಯಲ್ಲಿದ್ದಷ್ಟೂ ಹೊತ್ತು ಹೆಚ್ಚು ಜೊಲ್ಲನ್ನು ಸುರಿಸುವ ಮೂಲಕ ಇದು ಜೀರ್ಣರಸದ ಪ್ರಭಾವವನ್ನು ಉತ್ತಮಗೊಳಿಸುತ್ತದೆ. ಅಲ್ಲದೇ ಜೀರ್ಣರಸದ ಕ್ಷಮತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಪರಿಣಾಮವಾಗಿ ಹೊಟ್ಟೆಯುಬ್ಬರ, ಹೊಟ್ಟೆಯುರಿ ಮೊದಲಾದವುಗಳನ್ನು ಶಮನಗೊಳಿಸುತ್ತದೆ
ಮೆಂತೆಯ ಎಲೆ
ಮೆಂತೆಯ ಸೊಪ್ಪು ಅಥವಾ ಎಲೆಗಳಲ್ಲಿ ಥೈಮಾಲ್ ಎಂಬ ಪೋಷಕಾಂಶವಿದೆ. ಇದು ಜೀರ್ಣರಸದಲ್ಲಿ ಮಿಳಿತಗೊಂಡ ಬಳಿಕ ಇನ್ನಷ್ಟು ಜೀರ್ಣರಸ ಒಸರುವಂತೆ ಮಾಡಿ ಜೀರ್ಣಕ್ರಿಯೆಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಪರಿಣಾಮವಾಗಿ ವಾಕರಿಕೆ, ಹೊಟ್ಟೆಯುರಿ, ಅಪಾನವಾಯು, ಅಜೀರ್ಣ, ಹೊಟ್ಟೆನೋವು ಮೊದಲಾದ ತೊಂದರೆಗಳಿಗೆ ಶೀಘ್ರ ಶಮನ ನೀಡುತ್ತದೆ.