ತುಮಕೂರು :ಭೀಕರ ಅಪಘಾತ ಕುಂದಾಪುರದ ಹಿರಿಯ ಛಾಯಾಗ್ರಾಹಕ ಹಾಗೂ ಮಗ ಗಂಭೀರ

ಕುಂದಾಪುರ(ಉಡುಪಿ ಟೈಮ್ಸ್ ವರದಿ): ದಾವಣಗೆರೆಯಲ್ಲಿ ಕಾರು ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಕುಂದಾಪುರದ ಛಾಯಾಗ್ರಾಹಕ ಹೇರೂರು ಅಶೋಕ್ ಶೆಟ್ಟಿ ಹಾಗೂ ಅವರ ಪುತ್ರ ಗಂಭೀರ ಗಾಯಗೊಂಡಿರುವ ಘಟನೆ ಇಂದು ನಸುಕಿನ ಜಾವ ನಡೆದಿದೆ. ಕುಂದಾಪುರದ ಹಿರಿಯ ಛಾಯಾಚಿತ್ರಗಾರ, ಕುಂದಾಪುರ ತಾಲೂಕು ಛಾಯಾಗ್ರಾಹಕರ ಸಂಘ ಹಾಗೂ ರಾಜ್ಯ ಛಾಯಾಗ್ರಾಹಕರ ಸಂಘಟನೆಯ ಮಾಜಿ ಅಧ್ಯಕ್ಷ, ಹಾಗೂ ಸಂಚಾಲಕ ಹೇರೂರು ಅಶೋಕ ಕುಮಾರ್ ಶೆಟ್ಟಿ(58) ಮತ್ತು ಅವರ ಪುತ್ರ ಪನ್ನಗ (24) ಗಾಯಗೊಂಡವರು.

ನಾವುಂದದಲ್ಲಿ ಮಾನಸ ಸ್ಟುಡಿಯೋ ಮಾಲಕರಾಗಿರುವ ಅಶೋಕ್ ಕುಮಾರ್ ಶೆಟ್ಟಿ ಮದುವೆ ಕಾರ್ಯಕ್ರಮವೊಂದರ ಚಿತ್ರೀಕರಣಕ್ಕಾಗಿ ಮಗ ಪನ್ನಗ ಹಾಗೂ ಕುಮಾರ್ ಎಂಬುವರ ಜೊತೆಗೆ ತಮ್ಮ ಕಾರಿನಲ್ಲಿ ಹೋಗಿದ್ದರು.

ಮದುವೆ ಕಾರ್ಯಕ್ರಮ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ ಕಾರು ಕಂಟೈನರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಛಾಯಾ ಗ್ರಾಹಕ ಅಶೋಕ್ ಶೆಟ್ಟಿ ಹಾಗೂ ಅವರ ಪುತ್ರ ಗಂಭೀರ ಗಾಯಗೊಂಡಿದ್ದು ಅಪಘಾತದಲ್ಲಿ ಕಾರಿನ ಹಿಂಬದಿ ಕೂತಿದ್ದ ಕುಮಾರ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಇವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್.ಕೆ.ಪಿ.ಎ ಜಿಲ್ಲಾ ಸಲಹಾ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಅವರ ಮಗ ಪನ್ನಗ ಅವರು ಶೀಘ್ರವಾಗಿ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಎಸ್ ಕೆ ಪಿ ಎ ಹಾರೈಸಿದೆ.

Leave a Reply

Your email address will not be published. Required fields are marked *

error: Content is protected !!