ಉಡುಪಿ: ನಗರ ಸಭೆಯಲ್ಲಿ ಮಹಿಳಾ ದಿನಾಚರಣೆ

ಉಡುಪಿ ಮಾ.12(ಉಡುಪಿ ಟೈಮ್ಸ್): ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಗರ ಸಭಾ ಕಚೇರಿಯಲ್ಲಿ ನಗರ ಸಭಾ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆಯಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಅರ್ಥ ಪೂರ್ಣವಾಗಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.

ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪೌರಾಯುಕ್ತರು ನಗರ ಸಭೆಯ ಮಹಿಳಾ ಸಿಬ್ಬಂದಿಗಳೊಂದಿಗೆ ನಗರ ಸಭೆಯ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿ ದಿನ 1000 ಕೆಜಿ ಗೂ ಅಧಿಕ ತ್ಯಾಜ್ಯವನ್ನು ಪ್ರತ್ಯೇಕಿಸಿ ನಿರ್ವಹಣೆ ಮಾಡಿದ ಸ್ಪಂದನಾ ನಗರ ಸ್ತ್ರೀ ಶಕ್ತಿ ಗುಂಪು ಇದರ ವನಜ, ಶ್ರೀ ಸಿದ್ದಿ ನಗರ ಸ್ತ್ರೀ ಶಕ್ತಿ ಗ್ರೂಪ್ ಇದರ ಚಂದಾ ಅನಂದ್ ಅಂಚನ್ ಹಾಗೂ ಕಾರುಣ್ಯ 2 ನಿರಂತರ ಉಳಿತಾಯ ಗುಂಪು ಇದರ ಮೀನಾಕ್ಷಿ ಅವರನ್ನು ಹಾಗೂ ತ್ಯಾಜ್ಯ ಸಂಗ್ರಹಣೆಯ ವಾಹನದ ಮಹಿಳಾ ಚಾಲಕಿ ಸ್ಮಿತಾ ಅವರನ್ನು ಸನ್ಮಾನಿಸಿ ಗೌರವಿಸಿದರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಮಹಿಳೆಯರಿಗೂ ಹೂ ನೀಡುವ ಮೂಲಕ ಪೌರಾಯುಕ್ತರು ಮಹಿಳಾ ದಿನಾಚರಣೆಯ ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಸ್ಪಂದನಾ ನಗರ ಸ್ತ್ರೀ ಶಕ್ತಿ ಗುಂಪು ಮತ್ತು ಪೃಥ್ವಿ ನವೋದಯ ಸ್ವ ಸಹಾಯ ಸಂಘ ಇದರ ವತಿಯಿಂದ ಪರಿಸರ ಅಭಿಯಂತರರಾದ ಸ್ನೇಹ ಕೆ.ಎಸ್ ಅವರನ್ನು ಸನ್ಮಾನಿಸಿ ಗೌರವಿಸಿರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪೌರಾಯುಕ್ತ ರಾಯಪ್ಪ ಅವರು, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿ ಪುರುಷರಿಗೆ ಸರಿ ಸಮಾನವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಈ ದಿನ ಪ್ರತಿಯೊಬ್ಬ ಮಹಿಳೆಯನ್ನು ಗೌರವಿಸಬೇಕು. ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬುದು ಸತ್ಯವಾದ ಮಾತು. ಮಹಿಳೆಯನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಕಂದಾಯ ವಿಭಾಗದ ಸುಧಾಕರ್ ಕೋಟ್ಯಾನ್ ಅವರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಕಚೇರಿ ವ್ಯವಸ್ಥಾಪಕ ನಾಗರಾಜ ಕೆ, ಕಂದಾಯ ಅಧಿಕಾರಿ ಸಂತೋಷ್, ಸಮುದಾಯ ಸಂಘಟನಾ ಅಧಿಕಾರಿ ನಾರಾಯಣ ಎಸ್ ಎಸ್, ಪರಿಸರ ಅಭಿಯಂತರಾದ ಸ್ನೇಹ ಕೆ.ಎಸ್, ಪ್ರಭಾರ ಆರೋಗ್ಯ ನಿರೀಕ್ಷರಾದ ಮನೋಹರ್, ಸುರೇಂದ್ರ ಹೋಬಳಿದಾರ್ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!