ಉಡುಪಿ: 240 ಸರ್ಕಾರಿ ವಸತಿ ಸಮುಚ್ಛಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ವರ್ಚುವಲ್ ಮೂಲಕ ಲೋಕರ್ಪಣೆ

ಉಡುಪಿ, ಮಾ.2 : ಉಡುಪಿ ನಗರಸಭಾ ವ್ಯಾಪ್ತಿಯ ಹೆರ್ಗ ಸರಳಬೆಟ್ಟು ಪ್ರದೇಶದಲ್ಲಿರುವ 240 ಸರ್ಕಾರಿ ವಸತಿ ಸಮುಚ್ಛಯಗಳ ಕಟ್ಟಡವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಇಂದು ವರ್ಚುವಲ್ ಮೂಲಕ ಲೋಕರ್ಪಣೆ ಮಾಡಿದರು.

ಈ ಕಾರ್ಯಕ್ರಮ ನೇರ ಪ್ರಸಾರವನ್ನು ವಸತಿ ಸಮುಚ್ಛಯದ ಅಂಗಳದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅವರು ಮಾತನಾಡಿ, ವಸತಿ ಹಂಚಿಕೆಯಾದ ಫಲಾನುಭವಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ವಸತಿ ಸಮುಚ್ಛಯಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಹಂತಹಂತವಾಗಿ ಕಲ್ಪಿಸಲಾಗುವುದು ಎಂದು ಹೇಳಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಾಗೂ ನಗರ ಸಭೆಯ ಅನುದಾನದ ಅಡಿಯಲ್ಲಿ 240 ಮನೆಗಳನ್ನು ಹೆರ್ಗಾ ವ್ಯಾಪ್ತಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಸುಂದರವಾಗಿ ನಿಮಾಣ ಮಾಡಿದ್ದಾರೆ. ಈಗಾಗಲೇ ಪೂರ್ತಿ ಪ್ರಮಾಣದಲ್ಲಿ ಮನೆಯ ಹಂಚಿಕೆಯಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಹಾಗೂ ಪ್ರತಿಯೊಬ್ಬರೂ ಸ್ವಂತ ಮನೆ ಹೊಂದಬೇಕೆಂಬ ಕನಸನ್ನು ಹೊಂದಿರುತ್ತಾರೆ. ಇದನ್ನು ನನಸಾಗಿಸಲು ಸರಕಾರ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ. ಇಂದು ರಾಜ್ಯದಾದ್ಯಂತ 1,80,000 ಮನೆಗಳ ನಿರ್ಮಾಣಕ್ಕೆ ಗುರಿ ಹೊಂದಿತ್ತು. ಈಗಾಗಲೇ 36,000 ಮನೆಗಳ ನಿರ್ಮಾಣ ಪೂರ್ಣಗೊಂಡು ಮುಖ್ಯಮಂತ್ರಿಗಳು ಇಂದು ಲೋಕಾರ್ಪಣೆಮಾಡುತ್ತಿದ್ದಾರೆ. ಇದು ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದರು.

ಹೆರ್ಗಾ ಸರಳ ಬೆಟ್ಟು ಪ್ರದೇಶದಲ್ಲಿರುವ ಸರಕಾರಿ ವಸತಿ ಸಮುಚ್ಛಯ ಕಟ್ಟಡಕ್ಕೆ ತಲುಪಲು ಇರುವ ಕಚ್ಛಾರಸ್ತೆಯನ್ನು ಪಕ್ಕಾ ಕಾಂಕ್ರೀಟ್ ರಸ್ತೆಯನ್ನಾಗಿಸಬೇಕು. ವಿದ್ಯುತ್ ದಾರಿದೀಪ, ಸುಸಜ್ಜಿತ ಆಟದ ಮೈದಾನ, ಉದ್ಯಾನವನ, ಅಂಗನವಾಡಿ ಕೇಂದ್ರ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಸ್ಥಳೀಯ ಜನರಬೇಡಿಕೆ ಇದೆ. ಇವುಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಮನೆಯ ಕೀ ಹಾಗೂ ದಾಖಲೆ ಪತ್ರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ವಿಜಯ ಲಕ್ಷ್ಮೀ, ಅಮೃತಾ ಕೃಷ್ಣ ಮೂರ್ತಿ, ಪೌರಾಯುಕ್ತ ರಾಯಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಪ್ರಸನ್ನ ಕುಮಾರ್, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ವಸತಿ ಸಮುಚ್ಚಯದ ಪ್ರತೀ ವಸತಿ ಗೃಹಗಳು 394 ಸ್ಕ್ವಾರ್ ಫೀಟ್ ಅಳತೆಯಿದ್ದು, 8.22 ಎಕರೆ ವಿಸ್ತೀರ್ಣದಲ್ಲಿ ತಲಾ 10 ರಂತೆ 24 ಫ್ಲಾಟ್‍ಗಳನ್ನು ಹೊಂದಿದೆ. 240 ಮನೆಗಳನ್ನು ಪ್ರತೀ ಮನೆಗೆ 7.42 ಲಕ್ಷರೂ. ವ್ಯಯಿಸಿ ನಿರ್ಮಾಣ ಮಾಡಲಾಗಿದೆ. ಸಾಮಾನ್ಯ ವರ್ಗದವರಿಗೆ ಬ್ಯಾಂಕ್ ವಯಿಂದ 3.8 ಲಕ್ಷ ಸಾಲ, ಕೇಂದ್ರ ಸರ್ಕಾರ 2 ಲಕ್ಷ, ರಾಜ್ಯ ಸರ್ಕಾರ 1,20,000ರೂ., ಹಾಗೂ ನಗರಸಭೆ 75,000 ರೂ, ಬಾಕಿ ಉಳಿದ ಹಣವನ್ನು ಫಲಾನುಭವಿಗಳು ಸಂದಾಯದೊಂದಿಗೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಬ್ಯಾಂಕ್ ಸಾಲ 2.58 ಲಕ್ಷ, 2 ಲಕ್ಷರೂ., ಕೇಂದ್ರ ಸರ್ಕಾರ, 1.5 ಲಕ್ಷ ರೂ, ರಾಜ್ಯಸರ್ಕಾರ, 75,000 ರೂ. ನಗರಸಭೆ ಬಾಕಿ ಉಳಿದ ಹಣವನ್ನು ಫಲಾನುಭವಿಗಳು ಭರಿಸಿದ್ದು, ಈಗಾಗಲೇ 240 ಮನೆಗಳಲ್ಲಿ 31 ಮನೆಗಳಲ್ಲಿ ಜನರು ವಾಸಿಸಲು ಪ್ರಾರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!