ಬೆಳ್ತಂಗಡಿ:ಬ್ರಹ್ಮಕಲಶೋತ್ಸವ ಸ್ವಾಗತ ಗೋಪುರ ಆಕಸ್ಮಿಕ ವಿದ್ಯುತ್ ಸ್ಪರ್ಶ ಯುವಕ ಸಾವು

ಬೆಳ್ತಂಗಡಿ (ಉಡುಪಿ ಟೈಮ್ಸ್ ವರದಿ) : ಬ್ರಹ್ಮಕಲಶೋತ್ಸವದ ಪ್ರಯುಕ್ತ ಸ್ವಾಗತ ಗೋಪುರ ನಿರ್ಮಾಣದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಗೊಂಡು ಯುವಕ ನೋರ್ವ ಮೃತಪಟ್ಟ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿಯ ನೆರಿಯ ಗ್ರಾಮದ ಬಯಲು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ನೆರಿಯ ಗ್ರಾಮದ ಅಪ್ಪಿಲ ನಿವಾಸಿ ಸೋಮಪ್ಪ ಗೌಡ ಎಂಬವರ ಪುತ್ರ ಉಮೇಶ( 38) ಮೃತಪಟ್ಟವರು.
ಕಾಟಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನೆರಿಯ ಬಯಲು ಎಂಬಲ್ಲಿ ನಿನ್ನೆ ರಾತ್ರಿ ಯುವಕರ ತಂಡ ಸ್ವಾಗತ ದ್ವಾರ ನಿರ್ಮಿಸುತ್ತಿತ್ತು. ಈ ಸಂದರ್ಭ ದ್ವಾರದ ಮೇಲ್ಗಡೆ ಎಚ್‍ಪಿಸಿಎಲ್ ನೆರಿಯ ಪಂಪ್ ಹೌಸ್‍ಗೆ ಹಾದು ಹೋದ ನಾಗಾರ್ಜುನ ಎಚ್‍ಟಿ ವಿದ್ಯುತ್ ಲೈನ್‍ಗೆ ಆಕಸ್ಮಿಕವಾಗಿ ಬಿದಿರು ತಾಗಿದೆ ಎನ್ನಲಾಗಿದೆ. ಈ ವೇಳೆ ಬಿದಿರಿನಲ್ಲಿ ವಿದ್ಯುತ್ ಪ್ರವಹಿಸಿ ಆಘಾತಕ್ಕೊಳಗಾದ ಉಮೇಶ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!