ಮಣಿಪಾಲ: ಸ್ಕೂಟರ್ ಡಿಕ್ಕಿ-ಪಾದಚಾರಿ ಮೃತ್ಯು
ಮಣಿಪಾಲ ಮೇ 29(ಉಡುಪಿ ಟೈಮ್ಸ್ ವರದಿ): ಸ್ಕೂಟರ್ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನಡೆದಿದೆ.
ಮೇ 27 ರಂದು ರಾತ್ರಿ ವೇಳೆ ಪ್ರಭ್ ಕಿರತ್ ಸಿಂಗ್ ಎಂಬಾತ ತನ್ನ ಸ್ಕೂಟರ್ನಲ್ಲಿ ಕೀರ್ತಿ ಮಟನಿಯು ಎಂಬವರೊಂದಿಗೆ ಉಡುಪಿಯಿಂದ ಮಣಿಪಾಲ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟಲು ನಿಂತಿದ್ದ ಓರ್ವ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಪಾದಚಾರಿ ಹಾಗೂ ಸ್ಕೂಟರ್ ನಲ್ಲಿದ್ದವರು ರಸ್ತೆಗೆ ಬಿದಿದ್ದು, ಗಂಭೀರ ಗಾಯಗೊಂಡ ಪಾದಚಾರಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.