ಧ್ವಜ ಮತ್ತು ಅಶೋಕ ಚಕ್ರ ವಿನ್ಯಾಸ ಕೇಕ್ ಕತ್ತರಿಸುವುದು ದೇಶಭಕ್ತಿಗೆ ವಿರುದ್ದವಲ್ಲ: ಹೈಕೋರ್ಟ್ ತೀರ್ಪು

ಚೆನ್ನೈ: ತ್ರಿವರ್ಣ ಮತ್ತು ಅಶೋಕ ಚಕ್ರ ವಿನ್ಯಾಸವನ್ನು ಹೊಂದಿರುವ ಕೇಕ್ ಅನ್ನು ಕತ್ತರಿಸುವುದು ದೇಶಭಕ್ತಿಗೆ ವಿರುದ್ದವಲ್ಲ ಅಥವಾ ರಾಷ್ಟ್ರಕ್ಕೆ ಅವಮಾನ ಮಾಡಿದಂತಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿರೋದಾಗಿ ಸುದ್ದಿಯೊಂದು ವರದಿಯಾಗಿದೆ

ಪ್ರಕರಣವೊಂದಕ್ಕೆ ಸಂಬಂಧಿಸಿ ರಾಷ್ಟ್ರೀಯ ಗೌರವ ಕಾಯ್ದೆ 1971 ರ ಸೆಕ್ಷನ್ 2 ರ ಅಡಿಯಲ್ಲಿ ತ್ರಿವರ್ಣ ಧ್ವಜದ ಬಣ್ಣ ಹೊಂದಿರುವ ಕೇಕ್ ಕತ್ತರಿಸುವುದು ಅಪರಾಧವಾಗಿದೆ ಎಂದು ಆರೋಪಿಸಿ ಡಿ ಸೆಂಥಿಲ್‍ಕುಮಾರ್ ಅವರು ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ತ್ರಿವರ್ಣ ಧ್ವಜ, ಭಾರತದ ನಕ್ಷೆಯ ವಿನ್ಯಾಸವಿರುವ ಕೇಕ್ ಕತ್ತರಿಸುವುದು ದೇಶ ಭಕ್ತಿಯ ವಿರುದ್ಧ ಅಥವಾ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ 1971 ರ ಅಡಿಯಲ್ಲಿ “ಅವಮಾನ” ಅಲ್ಲ ಎಂದು ತೀರ್ಪು ನೀಡಿದೆ.

2013 ರಲ್ಲಿ ನಡೆದ ಕ್ರಿಸ್‍ಮಸ್ ದಿನದ ಕಾರ್ಯಕ್ರಮವೊಂದರಲ್ಲಿ ತ್ರಿವರ್ಣ ಮತ್ತು ಅದರ ಮೇಲೆ ಅಶೋಕ ಚಕ್ರದೊಂದಿಗೆ 6×5 ಅಡಿ ಕೇಕ್ ಕತ್ತರಿಸಿ ಸಂಭ್ರಮ ಆಚರಣೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ 2,500 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಕೇಕ್ ಕತ್ತರಿಸಿರುವ ವಿಚಾರಕ್ಕೆ ಸಂಬಂದಿಸಿ ಡಿ ಸೆಂಥಿಲ್‍ಕುಮಾರ್ ಎಂಬವರು ದೂರು ದಾಖಲಿಸಿದ್ದರು.

ಇಂದು (ಮಾ.22) ನ್ಯಾಯಾಲಯದಲ್ಲಿ ಈ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರು, ಈ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಲು ಆದೇಶಿಸಿದ್ದು, ”ಭಾರತದಂತಹ ಪ್ರಜಾಪ್ರಭುತ್ವದಲ್ಲಿ ರಾಷ್ಟ್ರೀಯತೆ ಬಹಳ ಮಹತ್ವದ್ದಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಅದು ಅದರ ಅತಿರೇಕವು ನಮ್ಮ ರಾಷ್ಟ್ರದ ಸಮೃದ್ಧಿಗೆ ಹಿಂದಿನ ಎಲ್ಲ ವೈಭವಕ್ಕೆ ವಿರುದ್ದವಾದುದು. ದೇಶಭಕ್ತಿ ಎಂದರೆ ಕೇವಲ ರಾಷ್ಟ್ರ ಧ್ವಜ ಎತ್ತಿ ಹಿಡಿಯುವುದಲ್ಲ, ತೋಳಿನ ಮೇಲೆ ಧರಿಸುವುದಲ್ಲ. ಬದಲಾಗಿ ಉತ್ತಮ ಆಡಳಿತಕ್ಕಾಗಿ ಶ್ರಮಿಸುವುದಾಗಿದೆ” ಎಂದು ಹೇಳಿದ್ದಾರೆ. ಅಲ್ಲದೆ ತ್ರಿವರ್ಣ ಮತ್ತು ಅಶೋಕ ಚಕ್ರ ವಿನ್ಯಾಸವನ್ನು ಹೊಂದಿರುವ ಕೇಕ್ ಅನ್ನು ಕತ್ತರಿಸುವುದು ದೇಶಭಕ್ತಿಗೆ ವಿರುದ್ದವಲ್ಲ ಅಥವಾ ರಾಷ್ಟ್ರಕ್ಕೆ ಅವಮಾನ ಮಾಡಿದಂತಾಗುವುದಿಲ್ಲ ಎಂದು ತೀರ್ಪು ನೀಡಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!