ಉರಿಗೌಡ-ನಂಜೇಗೌಡ ಎಂಬ ಚಿತ್ರ ಮಾಡಲ್ಲ: ಯೂಟರ್ನ್ ಹೊಡೆದ ಸಚಿವ ಮುನಿರತ್ನ

ಬೆಂಗಳೂರು ಮಾ.20: ಉರಿಗೌಡ-ನಂಜೇಗೌಡ ಎಂಬ ಚಿತ್ರ ಮಾಡಲು ಟೈಟಲ್ ರಿಜಿಸ್ಟರ್’ಗೆ ಅರ್ಜಿ ಹಾಕಿದ್ದ ಸಚಿವ ಮುನಿರತ್ನ ಅವರು ಇದೀಗ ನಿರ್ಮಲಾನಂದ ಸ್ವಾಮಿ ಭೇಟಿ ಬಳಿಕ ಈ ಚಿತ್ರ ಮಾಡಲ್ಲ ಎಂದು ಯೂಟರ್ನ್ ಹೊಡೆದಿದ್ದಾರೆ.

ಒಕ್ಕಲಿಗರನ್ನು ಖಳನಾಯಕರಾಗಿ ಚಿತ್ರಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಚಿತ್ರದ ವಿರುದ್ಧ ಧ್ವನಿ ಎತ್ತಿದ್ದರು. ಈ ಹಿನ್ನೆಲೆಯಲ್ಲಿ ನಿರ್ಮಲಾನಂದ ಸ್ವಾಮೀಜಿ ಸಚಿವ ಮುನಿರತ್ನ ಅವರನ್ನು ಕರೆಸಿ ತರಾಟೆಗೆ ತೆಗೆದುಕೊಂಡು, ಚಿತ್ರ ನಿರ್ಮಿಸದಂತೆ ತಾಕೀತು ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಮುನಿರತ್ನ ಅವರು ಸಿನಿಮಾ ಮಾಡಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ  ಎಂದು ಹೇಳಲಾಗುತ್ತಿದೆ.

ವಿವಾದಿತ ಪಾತ್ರಗಳಾಗಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನು ಆಧರಿಸಿದ ಸಿನಿಮಾ ಮಾಡಲು ಮುನಿರತ್ನ ಟೈಟಲ್ ರಿಜಿಸ್ಟರ್’ಗೆ ಅರ್ಜಿ ಹಾಕಿದ್ದರು. ಅಲ್ಲದೇ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿಬಿಟ್ಟಿದ್ದರು. ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಮುನಿರತ್ನ, ಮೇ 18 ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದಿದ್ದರು. 

Leave a Reply

Your email address will not be published. Required fields are marked *

error: Content is protected !!