ಈ ಬಾರಿ ನೂರಕ್ಕೆ 200% ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಶಿಕ್ಷಕನ ಸಂದೇಶ: ಕ್ರಮಕ್ಕೆ ಸಿಇಒ ಸೂಚನೆ

ಕೊಪ್ಪಳ ಮಾ.2 : ನೂರಕ್ಕೆ 200% ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಾಟ್ಸ್ ಆಪ್ ಸಂದೇಶ ಹಾಕಿಕೊಂಡ ಜಿಲ್ಲೆಯ ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಸೋಮಶೇಖರ ಹರ್ತಿ ಎಂಬುವವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಜಿಪಂ ಸಿಇಒ ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ಗೆ ಸೂಚನೆ ನೀಡಿದ್ದಾರೆ.

ಸುರೇಶ್ ಹೆಚ್ ಅಳವಂಡಿ ಎಂಬುವವರು `ಚುನಾವಣಾ ಸಮಯದಲ್ಲಿ ಸೋಮಶೇಖರ್ ರಾಜಕೀಯ ಸಂದೇಶಗಳನ್ನು ವಾಟ್ಸ್ ಆ್ಯಪ್ ಗ್ರೂಪ್‍ಗಳಲ್ಲಿ ಕಳುಹಿಸಿ ‘ಕರ್ನಾಟಕ ನಾಗರಿಕ ಸೇವಾ ನಿಯಮ’ವನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಈ ಸೂಚನೆ ನೀಡಲಾಗಿದೆ.

ದೂರನ್ನು ಪರಿಗಣಿಸಿದ ಜಿಪಂ ಸಿಇಒ ಅವರು ಶಾಲಾ ಶಿಕ್ಷಕ ಸೋಮಶೇಖರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶರಿಗೆ (ಆಡಳಿತ) ಪತ್ರ ಬರೆದಿದ್ದಾರೆ.

ಶಿಕ್ಷಕ ಸೋಮಶೇಖರ ಹರ್ತಿ ಅವರು ‘ಕೊಪ್ಪಳ ರಜತ ವೈಭವ ಕನ್ನಡ ಪ್ರಭ’ ಎಂಬ ವಾಟ್ಸ್ ಆ್ಯಪ್ ಗ್ರೂಪ್‍ನಲ್ಲಿ ‘ನೂರಕ್ಕೆ 200% ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂಬ ಸಂದೇಶದೊಂದಿಗೆ ವಿಡಿಯೋ ಹಂಚಿಕೊಂಡಿದ್ದರು.

1 thought on “ಈ ಬಾರಿ ನೂರಕ್ಕೆ 200% ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಶಿಕ್ಷಕನ ಸಂದೇಶ: ಕ್ರಮಕ್ಕೆ ಸಿಇಒ ಸೂಚನೆ

Leave a Reply

Your email address will not be published. Required fields are marked *

error: Content is protected !!