ಕಾರ್ಕಳ: ವಿಜಯ ಸಂಕಲ್ಪ ಬೈಕ್ ರ್ಯಾಲಿ ಯಶಸ್ವಿ

ಕಾರ್ಕಳ, ಫೆ.28 : ಕಾರ್ಕಳ ಯುವ ಮೋರ್ಚಾ ವತಿಯಿಂದ ಪೇಟೆಯಲ್ಲಿ ವಿಜಯ ಸಂಕಲ್ಪ ಬೈಕ್ ರ್ಯಾಲಿಯನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಉದ್ಘಾಟಿಸಿದರು.

ಈ ಬೈಕ್ ರ್ಯಾಲಿಯ ಸಮಾರಂಭದಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗುವುದು ಕಟು ಸತ್ಯ. ಸಣ್ಣ ಮಗುವಿಗೂ ಈ ಸತ್ಯ ತಿಳಿದಿದೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರ ಇರಬೇಕಿದ್ದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರಷ್ಟೆ ಅನುಕೂಲ. ಕಾರ್ಕಳ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿ ಸುನಿಲ್ ಗೆಲುವಿಗೆ ಕೈಜೋಡಿಸಿ ಎಂದರು. ಹಾಗೂ ಕಳೆದ 70 ವರ್ಷ ನಾಡನ್ನು ಆಳಿದ ಪಕ್ಷಗಳು ದೇಶಕ್ಕೆ ರೈಲು, ಏರ್ ಪೋರ್ಟ್, ನೀರಾವರಿ, ಆರ್ಥಿಕ, ರಕ್ಷಣೆ ವಿಚಾರದಲ್ಲಿ ಕೊಟ್ಟ ಕೊಡುಗೆ ಹಾಗೂ ಅನಂತರದಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರಕಾರ ನೀಡಿದ ಕೊಡುಗೆಗಳನ್ನು ತುಲನೆ ಮಾಡಿ ನೋಡಿ, ಅಭಿವೃದ್ಧಿ ಸಂಪರ್ಕದಲ್ಲಿ ಕ್ರಾಂತಿ ನಡೆದಿದೆ. ನೀವು ಸ್ಥಳೀಯ ಬೂತ್‍ನಲ್ಲಿ ನೀಡುವ ಒಂದು ಮತ ದೇಶ, ಧರ್ಮ, ಸಂಸ್ಕೃತಿಯ ಉಳಿವಿಗೆ ನೀಡುವ ಗೌರವವಾಗಿದೆ. ದೇಶ, ರಾಜ್ಯವನ್ನು ಸದೃಢ ಅಭಿವೃದ್ಧಿ ಕಡೆಗೆ ಕೊಂಡೊಯ್ಯಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಸಚಿವ ಸುನಿಲ್ ಕುಮಾರ್ ಅವರು, ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ ಅಪಪ್ರಚಾರ ಕಾಂಗ್ರೆಸ್ ನ ಚಾಳಿ ಆದರೆ ನಮ್ಮ ಪ್ರಯತ್ನ ಪ್ರತಿ ಬೂತ್ ನಲ್ಲಿ ಮತ ಪ್ರಮಾಣ ಹೆಚ್ಚಾಗುವಂತೆ ನೋಡಿಕೊಳ್ಳುವುದು. ಮಾ.19 ರಂದು ಅಭಿವೃದ್ಧಿಯ ಪ್ರೋಗ್ರೆಸ್ ಕಾರ್ಡ್ ನೀಡಲಿದ್ದೇನೆ ಎಂದರು.

ರಾಜ್ಯ ಬಿಜೆಪಿ ಚುನಾವಣೆ ಸಹ ಉಸ್ತುವಾರಿ ಕೆ ಅಣ್ಣಾಮಲೈ ಅವರು ಮಾತನಾಡಿ, ಕೇಂದ್ರ, ರಾಜ್ಯದ ಎಲ್ಲ ಯೋಜನೆಗಳು ಈಗ ಜನರನ್ನು ತಲುಪಿದ್ದು ಕರ್ನಾಟಕವು ಉಳಿದೆಲ್ಲ ರಾಜ್ಯಗಳಿಗಿಂತ ಉತ್ತಮ ರಾಜ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ| ಸಂದೀಪ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ವಿಭಾಗ ಪ್ರಭಾರಿ ಉದಯಕುಮಾರ್, ನಾಯಕರಾದ ಯಶ್ ಪಾಲ್ ಸುವರ್ಣ, ಮಹಾವೀರ ಹೆಗ್ಡೆ, ವಿಖ್ಯಾತ್ ಶೆಟ್ಟಿ, ಮುನಿರಾಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಕಳ ಪೇಟೆಯಲ್ಲಿ ನಡೆದ ಬೈಕ್ ರ್ಯಾಲಿಯಲ್ಲಿ ಸಚಿವ ಸುನಿಲ್ ಕುಮಾರ್ ಸಹಿತ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!