ಚಿಕ್ಕಮಗಳೂರು: ಮುಳ್ಳುಹಂದಿ ಬೇಟೆಯಾಡಲು ಗುಹೆಯೊಳಗೆ ತೆರಳಿದ್ದ ಇಬ್ಬರು ಉಸಿರುಗಟ್ಟಿ ಮೃತ್ಯು

ಚಿಕ್ಕಮಗಳೂರು ಫೆ.28 : ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಮುಳ್ಳುಹಂದಿ ಬೇಟೆಗೆ ಹಂದಿಗಳ ಗುಹೆಯೊಳಗೆ ತೆರಳಿದ್ದ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ತಮಿಳುನಾಡು ಮೂಲದ ಕಾರ್ಮಿಕ ಗೊವಿಂದರಾಜು (30) ವಿಜಯ್ ಕುಮಾರ್ (29) ಮೃತಪಟ್ಟವರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮೃತದೇಹಗಳನ್ನ ಗುಹೆಯಿಂದ ಹೊರತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

ಕಾಫಿ ತೋಟದ ಕೆಲಸಕ್ಕೆ ತಮಿಳುನಾಡಿನಿಂದ‌ ಬಂದಿದ್ದ ನಾಲ್ವರು ಕಾರ್ಮಿಕರು ಮಾಳಿಗನಾಡು ಸಮೀಪದ ಆನೆಗುಂದಿ ಎಸ್ಟೇಟ್‌ನ ಸಮೀಪದ ಬೆಟ್ಟದ ಸುರಂಗದಲ್ಲಿ ಮುಳ್ಳುಹಂದಿ ಹಿಡಿಯುಲು ತೆರಳಿದ್ದರು. ಈ ವೇಳೆ ಮಣ್ಣು ಕುಸಿತವಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆನ್ನಲಾಗಿದೆ.

ಮುಳ್ಳುಹಂದಿ ಗುಹೆಗೆ ಹೊಗೆ ಹಾಕಿ ನಂತರ ಒಬ್ಬೊಬ್ಬರಾಗಿ ಸುರಂಗದ ಒಳಗೆ ಹೋಗಿದ್ದಾರೆ. ಆದರೆ ಒಬ್ಬರು ಬರಲಿಲ್ಲ ಎಂದು ಮತ್ತೊಬ್ಬರು ಹೋಗಿದ್ದಾರೆ. ಕೊನೆಗೆ ಇಬ್ಬರು ವಾಪಾಸ್ಸು ಬಂದಿದ್ದು, ಇನ್ನಿಬ್ಬರು ಸುರಂಗದೊಳಗೇ ಸಿಲುಕಿದ್ದಾರೆ. ಅಲ್ಲಿಯೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!