ಕೋಮು ಪ್ರಚೋದನೆಗೆ ಬುನಾದಿ ಹಾಕಿದ್ದೇ ಸಿದ್ದರಾಮಯ್ಯ: ಶೋಭಾ ಕರಂದ್ಲಾಜೆ

ಕೊಪ್ಪಳ ಫೆ.22: ಟಿಪ್ಪು ಜಯಂತಿ ಆಚರಿಸುವ ಮೂಲಕ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕೋಮುಗಲಭೆ ಪ್ರಚೋದನೆಗೆ ಬುನಾದಿ ಹಾಕಿದರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಹೇಳಿದ್ದಾರೆ.

ಇಂದು ಕೊಪ್ಪಳದಲ್ಲಿ ಮಾತನಾಡಿದ ಅವರು, ಯಾವ ಮುಸ್ಲಿಮರೂ ಟಿಪ್ಪು ಜಯಂತಿ ಮಾಡುವಂತೆ ಕೇಳಿರಲಿಲ್ಲ. ಆದರೂ ಮತ ಬ್ಯಾಂಕ್ ರಾಜಕಾರಣಕ್ಕೆ  ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಿದರು. ಮುಸ್ಲಿಂ ಸಮುದಾಯದಲ್ಲಿ ವ್ಯಕ್ತಿ ಪೂಜೆ ಇಲ್ಲದಿದ್ದರೂ, ಟಿಪ್ಪು ಜಯಂತಿ ಮಾಡಿದರು ಎಂದು ಟೀಕಿಸಿದರು.

ವೀರಶೈವ ಲಿಂಗಾಯತರನ್ನು ಒಡೆಯಲು ಯತ್ನಿಸಿದರು. ಶಾಲಾ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಿದರು ಎಂದ ಅವರು, ಒಂದು ವರ್ಗಕ್ಕೆ ಮಾತ್ರ ಶಾದಿ ಭಾಗ್ಯ ಕೊಟ್ಟಿದ್ದು ಯಾಕೆ? ಎಂದು ಪ್ರಶ್ನಿಸಿದರು. ಹಾಗೂ ಸಿದ್ದರಾಮಯ್ಯ ಸಮುದಾಯದವರಲ್ಲಿ ಬಡ ಜನರು ಇಲ್ಲವಾ ? ಅವರಿಗೇಕೆ ಭಾಗ್ಯಗಳನ್ನು ನೀಡಲಿಲ್ಲ. ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಪಿಎಫ್‌ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿಸಿದರು. ಮತಕ್ಕಾಗಿ ಓಲೈಕೆ ರಾಜಕಾರಣ ಮಾಡಿದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.

ಇದೇ ವೇಳೆ ಅಶ್ವತ್ಥನಾರಾಯಣ ಹೇಳಿಕೆ ತಪ್ಪು ಎಂದ‌ ಅವರು, ಎಲ್ಲ ಪಕ್ಷಗಳಿಗೆ ಅವರದ್ದೇ ಆದ ತತ್ವ ಹಾಗೂ ಸಿದ್ಧಾಂತಗಳಿವೆ. ಅದಕ್ಕೆ ತಕ್ಕಂತೆ ಮಾತನಾಡಬೇಕು. ಯಾರೇ ಆಗಲಿ ಕೊಲ್ಲುವ ಬಗ್ಗೆ ಮಾತಾಡಬಾರದು. ಅದನ್ನು ಒಪ್ಪುವುದಿಲ್ಲ. ಆಶ್ವತ್ಥ ನಾರಾಯಣ ಅವರು ಸಿದ್ದರಾಮಯ್ಯ ಅವರನ್ನು ಟಿಪ್ಪು ಕೊಂದಂತೆಯೇ ಕೊಲೆಮಾಡಬೇಕು ಎಂದು ನೀಡಿದ ಹೇಳಿಕೆ ಸರಿಯಲ್ಲ. ಇದು ನಮ್ಮ ಪಕ್ಷದ ಸಿದ್ಧಾಂತ ಅಲ್ಲ ಎಂದರು.

ಡಬಲ್ ಎಂಜಿನ್ ಸರ್ಕಾರದ ಗುರಿಯೇ ದೇಶದ ಅಭಿವೃದ್ಧಿ. ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ರಾಜ್ಯದ ವಿಧಾನಸಭಾ ಚುನಾವಣೆ ಎದುರಿಸಲಾಗುವುದು ಎಂದರು ಹಾಗೂ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಸರಿಡುವ ವಿಷಯ ವಿನಾಕಾರಣ ವಿವಾದ ಆಗಬಾರದು. ಅಭಿವೃದ್ಧಿ ಬಗ್ಗೆ ಚರ್ಚಿಸೋಣ. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!