ಮಹಿಳಾಧಿಕಾರಿಗಳಿಬ್ಬರ ಕಿತ್ತಾಟ-ನೋಟಿಸ್ ನೀಡುವಂತೆ ಸಿಎಂ ಸೂಚನೆ

ಬೆಂಗಳೂರು ಫೆ.20 : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಬಹಿರಂಗ ಕಿತ್ತಾಟದ ಹಿನ್ನೆಲೆಯಲ್ಲಿ ಇಬ್ಬರೂ ಮಹಿಳಾಧಿಕಾರಿಗಳಿಗೆ ನೋಡಿಸ್ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ಐಎಎಸ್ ಹಾಗೂ ಐಪಿಎಸ್ ಬೀದಿ ರಂಪಾಂಟದಿಂದ ಸರ್ಕಾರಕ್ಕೆ ಮುಜುಗರ ಉಂಟಾಗುತ್ತಿದೆ. ಅಧಿವೇಶನದ ಸಂದರ್ಭದಲ್ಲಿ ವಿಪಕ್ಷ ನಾಯಕರು ಇದನ್ನೇ ದೊಡ್ಡ ವಿಷಯವನ್ನಾಗಿ ಚರ್ಚೆ ನಡೆಸಬಹುದು. ಅಧಿಕಾರಿಗಳಾದವರು ಸಾರ್ವಜನಿಕರಿಗೆ ಮಾದರಿಯಾಗಬೇಕು. ಈ ರೀತಿಯಲ್ಲಿ ಬೀದಿಯಲ್ಲಿ ರಂಪಾಟ ಮಾಡ್ತಿರೋದು ಸರಿಯಲ್ಲ. ಇವರಿಂದ ಎಲ್ಲಾ ಐಎಎಸ್, ಐಪಿಎಸ್ ಅಧಿಕಾರಿಗಳಿಗೂ ಅಪಮಾನ ಆದಂತೆ. ಹಾಗಾಗಿ ಇಬ್ಬರಿಗೂ ಸ್ಪಷ್ಟನೆ ನೀಡುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇಬ್ಬರು ಅಧಿಕಾರಿಗಳಿಂದ ವರದಿ ಪಡೆದು ಕ್ರಮ ತೆಗೆದುಕೊಳ್ಳಲು ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ. ಅಧಿಕಾರಿಗಳು ನೋಟಿಸ್‍ಗೆ ಉತ್ತರ ನೀಡಿದ ಬಳಿಕ ಸಿಎಂ ಬೊಮ್ಮಾಯಿ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಕಿತ್ತಾಟಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸಾಮಾನ್ಯ ಜನರು ಈ ರೀತಿ ಮಾತಡಲ್ಲ. ಬಹಳ ಕೆಟ್ಟದಾಗಿ ವರ್ತನೆ ಮಾಡಿರೋದು ಗಮನಕ್ಕೆ ಬಂದಿದೆ. ಜನರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವ ಮಾನವರು ಅಂದುಕೊಂಡಿದ್ದಾರೆ. ಆದರೆ ಇವರಿಂದ ಎಲ್ಲಾ ಅಧಿಕಾರಿಗಳಿಗೂ ಅಪಮಾನ ಆಗಿದೆ ಎಂದು ಬೇಸರ ಹೊರ ಹಾಕಿದರು. ಹಾಗೂ ಈ ವಿಚಾರವಾಗಿ ಈಗಾಗಲೇ ಡಿಜಿ ಹಾಗೂ ಸಿಎಸ್ ಜೊತೆಗೂ ಮಾತಾಡಿದ್ದೇನೆ. ಇದೆಲ್ಲವೂ ಅವರ ವೈಯಕ್ತಿಕ ವಿಚಾರಗಳಾಗಿದ್ದು, ಏನೇನೋ ಮಾತನಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರಿಂದ ನನಗೂ ತುಂಬಾ ನೋವು ಆಗಿದೆ. ಕಾನೂನು ಚೌಕಟ್ಟಿನೊಳಗೆ ಏನು ಕ್ರಮ ತಗೊಬೇಕೋ ಅದನ್ನು ಸಿಎಂ ತೆಗೆದುಕೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!