ವಿವಿಧ ಬೇಡಿಕೆಗಳನ್ನು ಈಡೇರಿಸಲು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ನಿಯೋಗ ಮುಖ್ಯಮಂತ್ರಿ ಭೇಟಿ
ಉಡುಪಿ ಫೆ.3 (ಉಡುಪಿ ಟೈಮ್ಸ್ ವರದಿ) : ಮೀನುಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ನಿಯೋಗ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಯಾಂತ್ರಿಕ ಮೀನುಗಾರಿಕಾ ದೋಣಿಗಳಿಗೆ ಡೀಸೆಲ್ ಪ್ರಮಾಣ 500 ಲೀಟರ್ ಗೆ ಹೆಚ್ಚಿಸುವುದು, ಟೆಬ್ಮಾ ಶಿಫ್ ಯಾರ್ಡ್ ನ್ನು ಮಲ್ಪೆ ಮೀನುಗಾರಿಕೆಗೆ ಬಿಟ್ಟುಕೊಡುವುದು, ನಾಡದೋಣಿಯವರಿಗೆ 400 ಲೀಟರ್ ನಂತೆ ಸೀಮೆಎಣ್ಣೆಯ ಪೂರೈಕೆ ಮಾಡುವುದು, ನಾಡ ದೋಣಿಯವರಿಗೆ ತಂಗುದಾಣ ನಿರ್ಮಿಸುವುದು, ಯಶಸ್ವಿನಿ ಯೋಜನಾ ಸೌಲಭ್ಯ ವಿಸ್ತರಿಸುವುದು, ಮೀನುಗಾರ ಮಹಿಳೆಯರಿಗೆ ಒಣ ಮೀನು ಒಣಗಿಸಲು ಗುತ್ತಿಗೆ ಆಧಾರದಲ್ಲಿ ನಿವೇಶನ ನೀಡುವುದು, ಮೀನುಗಾರಿಕಾ ಚಟುವಟಿಕೆ ಹಾಗೂ ಮೀನುಗಾರಿಕಾ ಅಭಿವೃದ್ಧಿಗೆ ಅನುದಾನ ಒದಗಿಸುವುದು ಹೀಗೆ ಮೀನುಗಾರಿಕಾ ಚಟುವಟಿಕೆಯನ್ನು ಅಭಿವೃದ್ಧಿಗೊಳಿಸಲು ಈ ಸಾಲಿನ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಘೋಷಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ, ಮಲ್ಪೆ ಮೀನುಗಾರರ ಸಂಘ ಬಂದರು ಮಲ್ಪೆ ಇದರ ಅಧ್ಯಕ್ಷ ಹಾಗೂ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಉಡುಪಿ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.