ಪತ್ನಿ ಶೀಲ ಶಂಕಿಸಿ ಬರ್ಬರವಾಗಿ ಹತ್ಯೆ ಮಾಡಿ ಪೊಲೀಸರ ಮುಂದೆ ಶರಣಾದ ಪತಿ

ಬೆಂಗಳೂರು ಫೆ.3 : ಅನೈತಿಕ ಸಂಬಂಧ ಇರುವ ಬಗ್ಗೆ ಶಂಕಿಸಿ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್‌ನಲ್ಲಿ ನಡೆದಿದೆ.

ಲೇದಿಯಾ ಕೊಲೆಯಾದ ಮಹಿಳೆ, ಮೋರಿಸ್ ಆರೋಪಿ ಪತಿ. ಹೆಂಡತಿಯನ್ನು ಕೊಲೆ ಗೈದ ಬಳಿಕ ಆರೋಪಿ ಪತಿ ತಾನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಕೃತ್ಯವೆಸಗಿದ ಬಳಿಕ ಬೆಳಗ್ಗೆ 10.30ಕ್ಕೆ ಪೊಲೀಸ್ ಕಂಟ್ರೋಲ್‌ ರೂಮ್ ಗೆ ಕರೆ ಮಾಡಿ, ಮನೆಯಲ್ಲಿ ಕೌಟುಂಬಿಕ ಕಾರಣಕ್ಕಾಗಿ ಜಗಳ ನಡೆದಿದೆ ಎಂದು ಹೇಳಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಲೈದಿಯಾಳ ಶವ ಕ್ರೂರವಾಗಿ ಹತ್ಯೆಯಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ‌‌. ಬಳಿಕ ಪತ್ನಿ‌ ಲೇದಿಯಾಳನ್ನು ಕೊಲೆ ಮಾಡಿದ ಆರೋಪದಡಿ ಪತಿ ಮೋರಿಸ್ ನನ್ನ ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಪಿ ಭೀಮಾಶಂಕರ ಗುಳೇದ್ ಅವರು, ರಾಮಮೂರ್ತಿನಗರದ ಹೊಯ್ಸಳ ಸ್ಟ್ರೀಟ್‌ನಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ವಾಸವಾಗಿರುವ ಮೋರಿಸ್, 18 ವರ್ಷಗಳ ಹಿಂದೆ ಲೇದಿಯಾಳನ್ನ ಮದುವೆಯಾಗಿದ್ದ. ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಪತ್ನಿ ಗೃಹಿಣಿಯಾದರೆ ಪತಿ ಮೊಬೈಲ್‌ ನೆಟ್ ವರ್ಕ್ ಕಂಪನಿಯೊಂದರಲ್ಲಿ ಕೆಲಸ‌ ಮಾಡುತ್ತಿದ್ದ. ಪರಪುರುಷನೊಂದಿಗೆ ಸಂಬಂಧವಿದೆ ಎಂದು‌ ಶಂಕಿಸಿ ಹೆಂಡತಿಯೊಂದಿಗೆ ಆಗಾಗ ಗಲಾಟೆ ಮಾಡುತ್ತಿದ್ದ. ಅದೇ ರೀತಿ ಇಂದು ಬೆಳಗ್ಗೆ ಮಕ್ಕಳು‌ ಶಾಲೆಗೆ ಹೋದ‌‌‌ ಮೇಲೆ ಪತ್ನಿ ಜೊತೆ ಕ್ಯಾತೆ ತೆಗೆದಿದ್ದಾನೆ. ನೋಡು ನೋಡುತ್ತಿದ್ದಂತೆ ಗಲಾಟೆ ತಾರಕ್ಕಕ್ಕೇರಿದೆ. ಈ ವೇಳೆ ಮನೆಯಲ್ಲಿದ್ದ ಸುಮಾರು ಎರಡೂವರೆ‌ ಕೆ.ಜಿ ತೂಕದ ಡಂಬಲ್ಸ್ ನಿಂದ ನಾಲ್ಕು ಬಾರಿ ಪತ್ನಿಯ ತಲೆಗೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎಂದು  ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!