ಗುರುರಾಘವೇಂದ್ರ ಬ್ಯಾಂಕ್ ಸಾವಿರಾರು ಕೋಟಿ ಹಗರಣ: ಕಾಂಗ್ರೆಸ್ ಸದಸ್ಯರಿಂದ ಧರಣಿ

ಬೆಳಗಾವಿ ಡಿ.27 : ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ನ ಅವ್ಯವಹಾರ ಪ್ರಕರಣ ನಿನ್ನೆ ನಡೆದ ವಿಧಾನ ಪರಿಷತ್‍ನಲ್ಲಿ ಬಾರೀ ಸದ್ದು ಮಾಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಪ್ರತಿ ಪಕ್ಷ ಕಾಂಗ್ರೆಸ್ ಸದಸ್ಯರು ಪರಿಷತ್ತಿನ ಬಾವಿಗಿಳಿದು ಧರಣಿ ನಡೆಸಿದರು.

ನಿನ್ನೆ ವಿಧಾನ ಪರಿಷತ್ತಿನಲ್ಲಿ ನಿಯಮ 330ರ ಅಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯಯು ಬಿ. ವೆಂಕಟೇಶ್, ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರ ಪ್ರಕರಣ ಬೆಳಕಿಗೆ ಬಂದು 3 ವರ್ಷ ಕಳೆದಿವೆ. ಇದುವರೆಗೆ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು. ಆದರೆ ಇದಕ್ಕೆ ಸಹಕಾರ ಸಚಿವರು ಒಪ್ಪದಿದ್ದಾಗ, ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಹಾಗೂ ಈ ವೇಳೆ ಪ್ರತಿಭಟನಾ ನಿರತರು, ಕಾಣದ ಕೈಗಳು, ಸಂಸದರು ಮತ್ತು ಸಚಿವರೊಬ್ಬರ ಒತ್ತಡಕ್ಕೆ ಒಳಗಾಗಿ ಸಿಬಿಐಗೆ ಒಪ್ಪಿಸಲು ಸಹಕಾರ ಸಚಿವರು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಆಗ ಪ್ರತಿಕ್ರಿಯಿಸಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು, ಅತಿ ಹೆಚ್ಚು 2,282.08 ಕೋಟಿ ಸಾಲ ಪಡೆದ 14 ಜನರ ಮಾಹಿತಿ ಮತ್ತು ಲಭ್ಯವಿರುವ ದಾಖಲೆಗಳೊಂದಿಗೆ ತನಿಖಾ ವರದಿಯನ್ನು ಸಿಐಡಿ ಮತ್ತು ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಕಳುಹಿಸಲಾಗಿದೆ. ಜಪ್ತಿ ಮಾಡಿದ ಆಸ್ತಿಯನ್ನೂ ಹರಾಜು ಮಾಡಲು ಸಿದ್ಧತೆ ನಡೆದಿದೆ. ಜತೆಗೆ, ಸಿಒಡಿ ಅಧಿಕಾರಿಗಳು ಸಮರ್ಥರಾಗಿದ್ದು, ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ಹೇಳಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ನ ಪಿ.ಆರ್. ರಮೇಶ್, ಸಿಬಿಐಗೆ ಒಪ್ಪಿಸುವುದೇ ಸೂಕ್ತ. ಆದರೆ, ಸರಕಾರ ಹಿಂದೇಟು ಹಾಕುತ್ತಿರುವುದರ ಹಿಂದೆ ಸಂಸದರೊಬ್ಬರು ಮತ್ತು ಸಚಿವರೊಬ್ಬರ ಒತ್ತಡ ಇದೆ ಎಂದು ಆರೋಪಿಸಿದರು. ಈ ಆರೋಪಕ್ಕೆ ಆಕ್ರೋಶಗೊಂಡ ಸಚಿವರು, ಆಧಾರರಹಿತ ಆರೋಪ ಸಲ್ಲದು. ಸಿಬಿಐಗೆ ಒಪ್ಪಿಸಲು ನಮ್ಮ ಅಭ್ಯಂತರವೇನೂ ಇಲ್ಲ. ಆದರೆ, ಪ್ರಕರಣದ ತನಿಖೆಯು ಶೇ.80 ರಷ್ಟು ಪೂರ್ಣಗೊಂಡಿದೆ ಎಂದರು.

ಆದರೆ, ಇದಕ್ಕೆ ಒಪ್ಪದ ಸದಸ್ಯರು ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಜನವರಿ ಮೊದಲ ವಾರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಬಿಐ, ಸಿಒಡಿ, ಸಹಕಾರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗುವುದು. ಸಿಬಿಐ ತನಿಖೆ ಅನಿವಾರ್ಯ ಅನಿಸಿದರೆ, ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗುವುದುಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!