ನೋಟ್ ಬ್ಯಾನ್: ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಲಯ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ : ಸುಪ್ರೀಂ ಕೋರ್ಟ್

ನವದೆಹಲಿ ಡಿ.7 : ನೋಟು ಅಮಾನೀಕರಣ ಆರ್ಥಿಕ ನೀತಿಯ ವಿಷಯವಿರಬಹುದು ಆದರೆ ಅದರ ನಿರ್ಧಾರ ಕೈಗೊಂಡ ರೀತಿಯನ್ನು ಪರಿಶೀಲಿಸುವ ಅಧಿಕಾರ ತನಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2016ರಲ್ಲಿ 500 ಮತ್ತು 1000 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್, ಬಿಆರ್ ಗವಾಯಿ, ಎಎಸ್ ಬೋಪಣ್ಣ, ವಿ ರಾಮ ಸುಬ್ರಮಣಿಯನ್ ಮತ್ತು ಬಿವಿನಾಗರತ್ನ ಅವರನ್ನೊಳಗೊಂಡ ಪಂಚ ಪೀಠವು ಈ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಅರ್ಜಿಯ ವಿಚಾರಣೆ ವೇಳೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ಪರ ವಾದಿಸಿದ ಹಿರಿಯ ವಕೀಲ ಜೈದೀಪ್ ಗುಪ್ತಾ ಅವರು, ನೋಟು ಅಮಾನೀಕರಣವನ್ನು ಸಮರ್ಥಿಸಿಕೊಂಡರು. ಹಾಗೂ ಕಪ್ಪುಹಣ ಮತ್ತು ನಕಲಿ ಕರೆನ್ಸಿ ತಡೆಗೆ ನೋಟು ರದ್ದತಿ ನೀತಿಯ ಉದ್ದೇಶದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿ ಹೇಳಲಾದ ಉದ್ದೇಶಗಳು ಮತ್ತು ನೋಟು ಅಮಾನೀಕರಣದ ನಡುವೆ ಯಾವುದೇ ಸಂಬಂಧವಿದೆಯೇ ಎಂದು ಪರಿಶೀಲಿಸುವ ಮಟ್ಟಿಗೆ ಅನುಪಾತದ ತತ್ವವನ್ನು ಅನ್ವಯಿಸಬೇಕು ಎಂದು ಹೇಳಿದರು. ಹಾಗೂ ಆರ್ಥಿಕ ನೀತಿ ನಿರ್ಧಾರಗಳಿಗೆ ನ್ಯಾಯಾಂಗ ವಿಮರ್ಶೆಯನ್ನು ಅನ್ವಯಿಸಲಾಗುವುದಿಲ್ಲ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ನ್ಯಾಯಾಲಯವು ತೀರ್ಪಿನ ಅರ್ಹತೆಗೆ ಹೋಗುವುದಿಲ್ಲ, ಆದರೆ ನಿರ್ಧಾರವನ್ನು ತೆಗೆದುಕೊಂಡ ವಿಧಾನವನ್ನು ಪರಿಶೀಲಿಸಬಹುದು. ಇನ್ನು ‘ಆರ್ಥಿಕ ನೀತಿ ನಿರ್ಧಾರ ಎಂಬ ಕಾರಣಕ್ಕೆ ನ್ಯಾಯಾಲಯ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ ಎಂದು ಹೇಳಿದರು.

ಸುಮಾರು 5 ಗ ನಡೆದ ವಿಚಾರಣೆಯಲ್ಲಿ 500 ಮತ್ತು 1000 ರೂ ನೋಟುಗಳನ್ನು ವಾಪಸ್ ಪಡೆಯಲು ಬ್ಯಾಂಕ್‍ನಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಕಾರ್ಮಿಕರು ಮತ್ತು ಮನೆಕೆಲಸಗಾರರನ್ನೂ ನ್ಯಾಯಾಲಯವು ಗಮನಿಸಿತು. ಇದಕ್ಕೆ ಜನರು ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ ಎಂದು ಆರ್‍ಬಿಐ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ವೇಳೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮಾತನಾಡಿ, ನೋಟು ಅಮಾನೀಕರಣದ ಆರ್ಥಿಕ ನೀತಿಯು ಸಾಮಾಜಿಕ ನೀತಿಯೊಂದಿಗೆ ಸಂಬಂಧ ಹೊಂದಿದೆ. ಅಲ್ಲಿ ಮೂರು ದುಷ್ಪರಿಣಾಮಗಳನ್ನು ತೆಗೆದುಹಾಕಲು ಪ್ರಯತ್ನಿಸಲಾಗುತ್ತದೆ ಎಂದು ಹೇಳಿದರು.

ಆರ್‍ಬಿಐ, ಅಡ್ವೊಕೇಟ್ ಆನ್ ರೆಕಾರ್ಡ್ ಎಚ್‍ಎಸ್ ಪರಿಹಾರ್, ವಕೀಲರಾದ ಕುಲದೀಪ್ ಪರಿಹಾರ್ ಮತ್ತು ಇಕ್ಷಿತಾ ಪರಿಹಾರ್ ಅವರು ಹೆಚ್ಚುವರಿ ಅಫಿಡವಿಟ್ ನಲ್ಲಿ ಆರ್.ಬಿ.ಐ ಕಾಯಿದೆಯ ಸೆಕ್ಷನ್ 26 ರ ನಿಬಂಧನೆಗಳ ಅನುಸಾರವಾಗಿ ಭಾರತೀಯ ರಿಸರ್ವ್ ಬ್ಯಾಂಕ್, 1949ರ ಸಾಮಾನ್ಯ ನಿಯಮಗಳೊಂದಿಗೆ ಮಾಡಲಾಗಿದೆ ಎಂದು ಹೇಳಿದರು. ಆರ್‍ಬಿಐ ಭಾರತೀಯ ರಿಸರ್ವ್ ಬ್ಯಾಂಕ್‍ನ ಕೇಂದ್ರೀಯ ಮಂಡಳಿಯ ಸಭೆಯು 2016ರ ನವೆಂಬರ್ 8 ರಂದು ನಡೆಯಿತು. ವಿವರವಾದ ಚರ್ಚೆಗಳ ನಂತರ ಸಾರ್ವಜನಿಕ ಹಿತಾಸಕ್ತಿಯಿಂದ ಅಂದು ಅಸ್ತಿತ್ವದಲ್ಲಿದ್ದ 500 ಮತ್ತು 1000 ರೂಪಾಯಿಗಳ ನೋಟಗಳನ್ನು ಕಾನೂನುಬದ್ಧವಾಗಿ ಹಿಂಪಡೆಯುವುದರಲ್ಲಿ ಹೆಚ್ಚಿನ ಲಾಭ ಇರುತ್ತದೆ ಎಂದು ಮಂಡಳಿಯು ತೀರ್ಮಾನಿಸಿದೆ ಎಂದರು.

ಅರ್ಜಿದಾರರ ಪರವಾದ ಮಂಡಿಸಿದ ಹಿರಿಯ ವಕೀಲ ಚಿದಂಬರಂ, ಸಂಸದರು ನೀತಿಯನ್ನು ಸ್ಥಗಿತಗೊಳಿಸಬಹುದಿತ್ತು ಆದರೆ ಶಾಸಕಾಂಗ ಮಾರ್ಗವನ್ನು ಅನುಸರಿಸಲಿಲ್ಲ ಎಂದು ಪ್ರಸ್ತಾಪಿಸಿದರು.

Leave a Reply

Your email address will not be published. Required fields are marked *

error: Content is protected !!