ಆರೂರು ಗ್ರಾಮದಲ್ಲಿ ಸೋಲಾರ್ ಬ್ಯಾಟರಿ ಕಳವು: 4 ಬ್ಯಾಟರಿ ಸಹಿತ ಇಬ್ಬರು ಕಳ್ಳರ ಬಂಧನ
ಬ್ರಹ್ಮಾವರ ನ.18 (ಉಡುಪಿ ಟೈಮ್ಸ್ ವರದಿ) : ಆರೂರು ಗ್ರಾಮದ ವಿವಿಧ ಕಡೆ ಪಂಚಾಯತ್ ನಿಂದ ಅಳವಡಿಸಿದ್ದ ಸೋಲಾರ್ ದಾರಿ ದೀಪಗಳ ಬ್ಯಾಟರಿ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು 24 ಗಂಟೆಯೊಳಗೆ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಉಪ್ಪೂರು ಗ್ರಾಮದ ಅಮ್ಮುಂಜೆ ಯಜ್ಞೇಶ್ (24), ಉದ್ಯಾವರ ಸಂಪಿಗೆನಗರ ಪೂರ್ಣೇಶ್ ಆಚಾರ್ಯ (22) ಬಂಧಿತ ಆರೋಪಿಗಳು.
ನ.15 ರಂದು ಆರೂರು ಗ್ರಾಮದ ವಿವಿಧ ಕಡೆ ಸೋಲಾರ್ ದಾರಿ ದೀಪಗಳ ಬ್ಯಾಟರಿಗಳನ್ನು ಕಳ್ಳತನ ನಡೆದಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಬ್ರಹ್ಮಾವರ ಪೊಲೀಸರು, ಕ್ಷೀಪ್ರ ಕಾರ್ಯಾಚರಣೆ ನಡೆಸಿ. ಕಳವು ಮಾಡಿದ ಬ್ಯಾಟರಿಗಳನ್ನು ಬೈಕ್ ನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದ ಆರೋಪಿಗಳನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಬ್ಯಾಟರಿ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಅದರಂತೆ ಪೊಲೀಸರು ಆರೋಪಿಗಳಿಂದ ಬೈಕ್ ಹಾಗೂ ಬ್ಯಾಟರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.