ಹಾವೇರಿ ತಹಸೀಲ್ದಾರ್ ಗಿರೀಶ್ ನಾಪತ್ತೆ: ದೂರು ದಾಖಲು

ಹಾವೇರಿ ನ.3 : ಇಲ್ಲಿನ ತಹಸೀಲ್ದಾರ್ ಗಿರೀಶ್ ಸ್ವಾದಿ ಅವರು ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಿರೀಶ್ ಸ್ವಾದಿ ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅ.31ರಂದು ರಾತ್ರಿ 9.30ಕ್ಕೆ ಬೆಳಗಾವಿ ಮೂಲದ ತಹಶೀಲ್ದಾರ್ ಗಿರೀಶ್ ಸ್ವಾದಿ ಅವರು ತಮಗೆ ಪರಿಚಿತರಿರುವ ಬೆಳಗಾವಿಯ ಅಜಾಮ್ ನಗರದ ಜಹೂರ ಅಂಗಡಿ ಅವರ ಮೊಬೈಲ್‍ನಿಂದ ಪತ್ನಿ ಭಾಗ್ಯಶ್ರೀ ಅವರಿಗೆ ಕಡೆಯ ಬಾರಿ ಕರೆ ಮಾಡಿದ್ದರು. ರಾತ್ರಿ ನಾನು ಮನೆಗೆ ಬರುವುದಿಲ್ಲ. ನಾಳೆ ನ.1 ಕರ್ನಾಟಕ ರಾಜ್ಯೋತ್ಸವ ಇದೆ. ಇಲ್ಲೇ ಹಾವೇರಿಯ ಪ್ರವಾಸಿ ಮಂದಿರದಲ್ಲಿ ಇಲ್ಲವೇ ಹಾನಗಲ್ ರಸ್ತೆಯಲ್ಲಿರುವ ಶಿವಾ ರೆಸಿಡೆನ್ಸಿಯಲ್ಲಿ ಉಳಿದುಕೊಳ್ಳುವುದಾಗಿ ಹೇಳಿದ್ದರೆಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಸ್ವಾದಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇನ್ನು ನ.1ರಂದು ಬೆಳಿಗ್ಗೆ 6 ಗಂಟೆಗೆ ಕಚೇರಿಯ ವಾಹನ ಚಾಲಕ ಹಾವೇರಿಯ ಸಿದ್ಧೇಶ್ವರ ನಗರದ ತಹಶೀಲ್ದಾರ್ ಅವರ ಮನೆಗೆ ಬಂದು ವಿಚಾರಿಸಿದ್ದು, ಮನೆಗೆ ಬಂದಿಲ್ಲ ಎಂಬುದು ಗೊತ್ತಾಗಿದೆ. ಆತಂಕಗೊಂಡ ಕುಟುಂಬಸ್ಥರು ಮತ್ತು ಕಚೇರಿಯ ಸಿಬ್ಬಂದಿ ಶಿವಾ ರಸಿಡೆನ್ಸಿಗೆ ಹೋಗಿ ವಿಚಾರಿಸಿದಾಗ, ನ.1ರಂದು ಬೆಳಗಿನ ಜಾವ 5 ಗಂಟೆಗೆ 112ನೇ ರೂಮ್ ಖಾಲಿ ಮಾಡಿ, ಏನೂ ಹೇಳದೇ ಹೋಗಿದ್ದಾರೆಂಬ ಮಾಹಿತಿ ಸಿಕ್ಕಿದೆ. ಈ ಮಧ್ಯೆ, ಅನಾರೋಗ್ಯ ಹಿನ್ನೆಲೆಯಲ್ಲಿ ಒಂದು ತಿಂಗಳು ರಜೆ ಪಡೆದಿದ್ದಾರೆ ಎಂದು ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!