ಉದ್ಯಾವರ ಪೇಟೆಯಲ್ಲಿ ಹೊಯಿಕೈ- ದೂರು ಪ್ರತಿದೂರು ದಾಖಲು
ಕಾಪು ಜೂ.6(ಉಡುಪಿ ಟೈಮ್ಸ್ ವರದಿ): ಉದ್ಯಾವರ ಪೇಟೆಯಲ್ಲಿ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿ ಕಾಪು ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಈ ಬಗ್ಗೆ ಪಿತ್ರೋಡಿಯ ನಿಶಾಂತ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ನಿಶಾಂರ ಅವರು ನಿನ್ನೆ ಮಧ್ಯಾಹ್ನದ ವೇಳೆ ಸುಧಾಕರ ಎಂಬುವವರ ಮನೆಯ ಕಾರ್ಯಕ್ರಮಕ್ಕೆ ತೆರಳಿ ವಾಪಾಸ್ಸು ಬರುತ್ತಿದ್ದ ವೇಲೆ ಮಿಥೇಶ ಎಂಬಾತನ ಜೊತೆಗೆ ಹಣದ ವಿಚಾರದಲ್ಲಿ ಚರ್ಚೆ ನಡೆದಿದೆ. ಇದೇ ವಿಚಾರದಲ್ಲಿ ಮಿಥೇಶನು ನಿಶಾಂತ ಅವರಿಗೆ ಜೀವ ಬೆದರಿಕೆ ಹಾಕಿದ್ದು ಮಾತ್ರವಲ್ಲದೆ ಸಂಜೆ ವೇಳೆ ಉದ್ಯಾವರ ಪೇಟೆಯಲ್ಲಿ ಮಿಥೇಶ ಹಾಗೂ ಗಿರೀಶ ಎಂಬಾತ ನಿಶಾಂತ ಅವರನ್ನು ತಡೆದು ನಿಲ್ಲಿಸಿ ಗಾಜಿನ ಬಾಟಲಿಯಿಂದ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಈ ವೇಳೆ ಹೊಡೆದಾಟದಲ್ಲಿ ನಿಶಾಂತ ಅವ ಕುತ್ತಿಗೆಯಲ್ಲಿದ್ದ ಸರ ಬಿದ್ದು ಹೋಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮತ್ತೊಂದೆಡೆ ಉದ್ಯಾವರದ ಮಠದಂಗಡಿಯ ಮಿಥೇಶ ಅವರು ಪೊಲೀಸರಿಗೆ ಈ ಬಗ್ಗೆ ಪ್ರತಿದೂರು ನೀಡಿದ್ದು, ಮಿಥೇಶ ಅವರು ನಿನ್ನೆ ಉದ್ಯಾವರ ಗ್ರಾಮದ ಮಠದಂಗಡಿಯ ಪೇಟೆಗೆ ಬಂದಿದ್ದ ವೇಳೆ ಇವರ ಪರಿಚಯದ ಉದ್ಯಾವರ ಪಿತ್ರೋಡಿಯ ನಿಶಾಂತ್ ಕರ್ಕಡ ಬಂದು ಇವರನ್ನು ತಡೆದು ನಿಲ್ಲಿಸಿ ಏಕಾಏಕಿ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದು, ಈ ವೇಳೆ ಇವರ ಹೊಡೆದಾಟದಲ್ಲಿ ಮಿಥೇಶ ಅವರ ಕುತ್ತಿಗೆಯಲ್ಲಿದ್ದ ಎರಡು ಸರ ಕಳೆದು ಹೋಗಿರುವುದಾಗಿ ಪೊಲೀಸರಿಗೆ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಕಾಪು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ಪ್ರತಿದೂರು ದಾಖಲಾಗಿದೆ.