ಬೆಳ್ತಂಗಡಿ: ಹಾರ ಬದಲಾಯಿಸುವ ವೇಳೆ ವರನ ಕೈ ಕಿವಿಗೆ ತಾಗಿತೆಂದು ಮುರಿದುಬಿದ್ದ ಮದುವೆ!

ಬೆಳ್ತಂಗಡಿ ಮೇ 28: ಇತ್ತೀಚೆಗೆ ಮದುವೆ ಸಮಾರಂಭಗಳಲ್ಲಿ ಕೊನೇ ಕ್ಷಣದಲ್ಲಿ ಮದುವೆ ಮುರಿದು ಬೀಳುವ ಅನೇಕ ಘಟನೆಗಳು ವರದಿಯಾಗುತ್ತಿದೆ. ಇದೀಗ ಇಂತಹದ್ದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರಲ್ಲಿ ಹಾರ ಬದಲಾಯಿಸುವ ವೇಳೆ ವರನ ಕೈ ಕಿವಿಗೆ ತಾಗಿತೆಂದು ಕ್ಷುಲ್ಲಕ ಕಾರಣಕ್ಕೆ ಮದುವೆಯೇ ಮುರಿದುಬಿದ್ದ ಘಟನೆ ನಡೆದಿದೆ. ಮೇ 25ರಂದು ಈ ಘಟನೆ ನಡೆದಿದ್ದು, ಮೂಡುಕೊಣಾಜೆಯ ಯುವತಿಗೆ ನಾರಾವಿಯ ಯುವಕನೊಂದಿಗೆ ಮದುವೆ ನಿಶ್ಚಯ ಆಗಿ ನಾರಾವಿ ಸಭಾಭವನವೊಂದರಲ್ಲಿ ಮದುವೆ ನಿಗದಿಯಾಗಿತ್ತು.  ಮದುವೆ ಶಾಸ್ತ್ರ ನಡೆಯುತ್ತಿದ್ದಂತೆ ಅರ್ಚಕರು ಹಾರ ಬದಲಿಸುವಂತೆ ಸೂಚಿಸಿದ್ದಾರೆ. ಅದರಂತೆ ವರ ಹಾರವನ್ನು ವಧುವಿನ ಕುತ್ತಿಗೆಗೆ ಹಾಕುತ್ತಿದ್ದಂತೆ, ವರನ ಕೈ ವಧುವಿನ ಕೊರಳಿಗೆ ತಾಗಿದೆಯೆಂದು ಸಿಟ್ಟಿಗೆದ್ದ ವಧು ಮಂಟಪದಿಂದ ಹೊರನಡೆಯಲು ಮುಂದಾಗಿದ್ದಳು. ಈ ವೇಳೆ ಮಧುವನ್ನು ಸಂಬಂಧಿಕರು ಸಮಾಧಾನಪಡಿಸಿದ್ದಾರಾದರೂ ಘಟನೆಯಿಂದ ಅವಮಾನಕ್ಕೊಳಗಾದ ವರನ ಕಡೆಯವರು ಮದುವೆಯನ್ನು ನಿರಾಕರಿಸಿದ್ದಾರೆ.

ಘಟನೆಯಲ್ಲಿ ಹೆಣ್ಣು ಗಂಡಿನ ಕಡೆಯವರು ಮಾತಿಗೆ ಮಾತು ಬೆಳೆಸಿಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭವಾಯಿತು. ಈ ವೇಳೆ ಸ್ಥಳಕ್ಕೆ ವೇಣೂರು ಪೊಲೀಸರು ಆಗಮಿಸಿ ಮಾತುಕತೆ ನಡೆಸಿದ್ದಾರೆ. ಆಗ ಮದುವೆ ನಿಶ್ಚಯ ಕಾರ್ಯಕ್ರಮಕ್ಕೆ ಬಂದ ವರ ಬೇರೆ, ಹೆಣ್ಣು ನೋಡಲು ಬಂದ ವರ ಬೇರೆ, ಈಗ ಮದುವೆಯಾಗುತ್ತಿರುವ ವರ ಬೇರೆಯೇ ಎಂದು ವಧು ಅಚ್ಚರಿಯ ಮಾತು ಹೇಳಿದ್ದಾಳೆ ಎನ್ನಲಾಗಿದೆ. ಇದೀಗ ಮದುವೆ ಮರಿದುಬಿದ್ದಿದ್ದು ಮಾದುವೆಗಾಗಿ ತಯಾರಾಗಿದ್ದ ಊಟವನ್ನು ಸ್ಥಳೀಯ ಶಾಲೆಗಳಿಗೆ ನೀಡಲಾಯಿತು ಎಂದು ತಿಳಿದು ಬಂದಿದೆ. 

Leave a Reply

Your email address will not be published. Required fields are marked *

error: Content is protected !!