ವಿಮಾನ ದುರಂತ: ಮೃತಪಟ್ಟ ಪ್ರಯಾಣಿಕನಲ್ಲಿ ಕೊರೋನಾ, ಸ್ಥಳದಲ್ಲಿದ್ದವರೆಲ್ಲರೂ ಕ್ವಾರಂಟೈನ್’ಗೆ

ತಿರುವನಂತಪುರಂ: ಕೋಝಿಕ್ಕೋಡ್ ನಲ್ಲಿ ಕಳೆದ ರಾತ್ರಿ ಸಂಭವಿಸಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರೆಲ್ಲರೂ ಕೋವಿಡ್-19 ಹಿನ್ನೆಲೆಯಲ್ಲಿ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಕೇರಳ ಸರ್ಕಾರ ಸೂಚಿಸಿದೆ.

ದುರ್ಘಟನೆಯಲ್ಲಿ ಮೃತಪಟ್ಟ ಒಬ್ಬ ಪ್ರಯಾಣಿಕರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಎಲ್ಲಾ ಪ್ರಯಾಣಿಕರ ಕೊರೋನಾ ಪರೀಕ್ಷೆ ನಡೆಯುತ್ತಿದೆ ಎಂದು ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸುಮಾರು 500 ಮಂದಿ ಇದೀಗ ಕ್ವಾರಂಟೈನ್ ಗೆ ಒಳಪಡಬೇಕು ಎಂದು ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಹೇಳಿದೆ. 

ಈ ಬಗ್ಗೆ ಹೇಳಿಕೆ ನೀಡಿರುವ ಆರೋಗ್ಯ ಸಚಿವೆ ಕೆ ಕೆ ಶೈಲಜಾ, ರಕ್ಷಣಾ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ್ದು ಎಲ್ಲರೂ ಕೋವಿಡ್-19 ಶಿಷ್ಟಾಚಾರದ ಪ್ರಕಾರ ಕ್ವಾರಂಟೈನ್ ಗೆ ಒಳಗಾಗಬೇಕು ಎಂದಿದ್ದಾರೆ. ಸ್ಥಳೀಯ ನಾಗರಿಕರು, ವಿಮಾನ ನಿಲ್ದಾಣ ಸಿಬ್ಬಂದಿ, ಕಾರ್ಯಕರ್ತರು, ಆರೋಗ್ಯ ಸೇವಕರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಆಂಬ್ಯುಲೆನ್ಸ್ ನೌಕರರು, ಚಾಲಕರು ಮತ್ತು ಮಾಧ್ಯಮ ಪ್ರತಿನಿಧಿಗಳು ಎಲ್ಲರೂ ನಿನ್ನೆ ಒಟ್ಟು ಸೇರಿದ್ದರು. ತುರ್ತು ಸನ್ನಿವೇಶದಲ್ಲಿ ಹಲವರಿಗೆ ಕೋವಿಡ್-19 ಶಿಷ್ಟಾಚಾರಗಳನ್ನು ಅನುಸರಿಸಲು ಸಾಧ್ಯವಾಗಲಿಲ್ಲ. ಈ ವಿಮಾನ ನಿಲ್ದಾಣ ಕಂಟೈನ್ ಮೆಂಟ್ ಪ್ರದೇಶದಲ್ಲಿ ಇರುವುದರಿಂದ ತಮ್ಮ ಮತ್ತು ಸಮಾಜದ ಒಳಿತಿಗಾಗಿ ಕ್ವಾರಂಟೈನ್ ಗೆ ಒಳಗಾಗಬೇಕೆಂದು ಹೇಳಿದ್ದಾರೆ.

ವಿಮಾನದಲ್ಲಿ ಸುಮಾರು 40 ಮಂದಿ ಅಸೌಖ್ಯಕ್ಕೀಡಾದವರಿದ್ದರು ಎಂಬ ಸುದ್ದಿ ಹಬ್ಬಿದ್ದು ಅದು ಸತ್ಯಕ್ಕೆ ದೂರವಾದುದು, ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಸಚಿವೆ ಶೈಲಜಾ ಹೇಳಿದ್ದಾರೆ. 

ಸರ್ಕಾರ ಸಂಪರ್ಕ ಸಂಖ್ಯೆಯನ್ನು ಬಿಡುಗಡೆ ಮಾಡಿದೆ, ಅವುಗಳು ಈ ರೀತಿ ಇದೆ: 1056 ಮತ್ತು 0471 2552056. ಮಲಪ್ಪುರಂನಲ್ಲಿರುವವರು 0483 2733251, 2733252, 2733253 ಮತ್ತು ಕೋಝಿಕ್ಕೋಡ್ ನಲ್ಲಿರುವವರು 0495 2376063, 2371471, 2373901ಗೆ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

error: Content is protected !!