ಕಾರ್ಪೊರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ: ಪತ್ರಕರ್ತ ಪಿ. ಸಾಯಿನಾಥ್‌ ಕಳವಳ

ಶಂಕರಘಟ್ಟ ಏ.4: ಕಾರ್ಪೊರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ ಎಂದು ಪತ್ರಿಕೋದ್ಯಮದ ಸ್ಥಿತಿಗತಿಗಳ ಬಗ್ಗೆ ರೇಮನ್ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಅಭಿವೃದ್ಧಿ ಪತ್ರಕರ್ತ ಪಿ. ಸಾಯಿನಾಥ್‌ ಕಳವಳ ವ್ಯಕ್ತಪಡಸಿದ್ದಾರೆ.

ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಇಂಗ್ಲಿಷ್ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಏರ್ಪಡಿಸಿದ್ದ ಡಾ. ಶಾಂತಿನಾಥ ದೇಸಾಯಿದತ್ತಿನಿಧಿ ಉಪನ್ಯಾಸಕಾರ್ಯಕ್ರಮದಲ್ಲಿ “200 ವರ್ಷಗಳ ಭಾರತೀಯ ಪತ್ರಿಕೋದ್ಯಮದ ಪ್ರಸಕ್ತ ಸ್ಥಿತಿಗತಿ”ಯ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತೀಯ ಪತ್ರಿಕೋದ್ಯಮ ಇಂದು ಸಂಕಷ್ಟದಲ್ಲಿದೆ. ಪತ್ರಿಕಾ ಸ್ವಾತಂತ್ರ್ಯ ಸಂಕಷ್ಟದಲ್ಲಿದೆ. ಪತ್ರಕರ್ತರ ಮೇಲೆ ವಿವಿಧಕ್ಷುಲ್ಲಕ ಕಾರಣಗಳಿಗೆ ಮೊಕದ್ದಮೆಗಳನ್ನು ದಾಖಲು ಮಾಡಲಾಗುತ್ತಿದೆ. ಅಲ್ಲದೆ ನೋಟೀಸ್ ನೀಡದೆ ಬಂಧಿಸಲಾಗುತ್ತಿದೆ ಹಾಗೂ ಬೆದರಿಸಲಾಗುತ್ತಿದೆ ಆತಂಕ ವ್ಯಕ್ತಪಡಿಸಿದ್ದಾರೆ.

ಭಾರತದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸಲು 52 ಕಾಯ್ದೆಗಳು ಈಗಾಗಲೇ ಅಸ್ತಿತ್ವದಲ್ಲಿತ್ತು. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳ ತಡೆಕಾಯಿದೆ ಮತ್ತು ವಿಪತ್ತು ನಿರ್ವಹಣೆಕುರಿತ ಕಾಯಿದೆಗಳನ್ನು ಪತ್ರಕರ್ತರ ಮೇಲೆ ದಾಖಲಿಸಿದ್ದು, ಪ್ರಸ್ತುತ ಅವುಗಳ ಸಂಖ್ಯೆ 62ರಷ್ಟಿದೆ. ಕೋವಿಡ್‌ ಕಾಲದಲ್ಲಿ ಉತ್ತರಪ್ರದೇಶದ ಗಂಗಾ ನದಿಯಲ್ಲಿ ಹೆಣಗಳು ತೇಲಿದ ವರದಿ ನೀಡಿದ ಮಾಧ್ಯಮಗಳಿಗೆ ಒಕ್ಕೂಟ ಮತ್ತುರಾಜ್ಯ ಸರ್ಕಾರಗಳು ಜಾಹೀರಾತು ನೀಡುವುದನ್ನು ನಿಲ್ಲಿಸಿದವು. ಆ ಮೂಲಕ ಅವುಗಳಿಗೆ ಮೂಗುದಾರ ಹಾಕಲಾಯಿತು.

ಕೋವಿಡ್‌ ನ ಮೊದಲ 12 ತಿಂಗಳಿನಲ್ಲಿ ಭಾರತದ ಜಿ.ಡಿ.ಪಿ. ಶೇ. 7ರಷ್ಟು ಇಳಿಕೆಯಾಗಿದೆ ಎಂದು ಸರ್ಕಾರ ಹೇಳಿತು. ಆದರೆ ಇದೇ ಸಮಯದಲ್ಲಿ ಭಾರತೀಯ ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಶೇ. 22ರಷ್ಟು ಏರಿಕೆಯಾಯಿತು. ಇವುಗಳ ತುಲನಾತ್ಮಕ ವರದಿಗಳು, ವಿಶ್ಲೇಷಣಗಳನ್ನು ಮುಖ್ಯವಾಹಿನಿ ಮಾಧ್ಯಮ ನೀಡುವುದೇ ಇಲ್ಲ ಎಂದು ಟೀಕಿಸಿದರು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚಿಯಲ್ಲಿ ಒಟ್ಟು 188 ದೇಶಗಳಲ್ಲಿ ಭಾರತ 142ನೇ ಸ್ಥಾನದಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯಅಪಾಯದಲ್ಲಿದೆ. ಮಾನವ ಅಭಿವೃದ್ಧಿ ಸೂಚ್ಯಂಕ ಸೂಚಿಯಲ್ಲಿ 132 ಸೇರಿದಂತೆ ವಿವಿಧ ಮಾನದಂಡಗಳಲ್ಲಿ ಕಳಪೆ ಪ್ರದರ್ಶನ ನೀಡುತ್ತಿದೆ. ಬಿಲಿಯನೇರ್‌ ಗಳ ಒಟ್ಟು ಸಂಖ್ಯೆಯಲ್ಲಿ ವಿಶ್ವದಲ್ಲಿಯೇ 3ನೇ ಸ್ಥಾನದಲ್ಲಿದೆ. ಸಮಕಾಲೀನ ಕಾಲಘಟ್ಟದ ತಲ್ಲಣಗಳು ಮತ್ತು ಸಂಕಷ್ಟಗಳ ಪ್ರಕ್ರಿಯೆಗಳ ವರದಿಗಾರಿಕೆಯೇ ನಿಜವಾದ ಪತ್ರಿಕೋದ್ಯಮ. ಬೃಹತ್ ಪ್ರಮಾಣದಲ್ಲಿರುವ ಬೆಳೆದಿರುವ ಇಂದಿನ ಮಾಧ್ಯಮ ಆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ಹೋರಾಡಿದ ಮಹಾತ್ಮಗಾಂಧಿ, ಅಂಬೇಡ್ಕರ್, ಭಗತ್ ಸಿಂಗ್, ಬಾಲ ಗಂಗಾಧರ್‌ತಿಲಕ್ ಸೇರಿದಂತೆ ಅನೇಕಾನೇಕರು ಮಹಾನ್ ಪತ್ರಕರ್ತರಾಗಿದ್ದರು. ಪ್ರತಿದಿನವೂ ಸ್ವಾತಂತ್ರ ಹೋರಾಟ, ರಾಜಕೀಯ, ಸಾಮಾಜಿಕ ಸುಧಾರಣೆಗಳ ಕುರಿತುಯತೇಚ್ಛವಾದ ಬರಹಗಳನ್ನು ಪ್ರಕಟಿಸುತ್ತಿದ್ದರು. ಅಂದು ಮಾಧ್ಯಮ ಬಹಳ ಸಣ್ಣ ಪ್ರಮಾಣದಲ್ಲಿತ್ತು ಆದರೆ ಅದು ಅಶಿಕ್ಷಿತರನ್ನೂ ಸೇರಿ ಎಲ್ಲರನ್ನುತಲುಪುವ ಮೂಲಕ ಹೋರಾಟ, ಸುಧಾರಣೆಗಳಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿತ್ತು. ಆದರೆ ಇಂದು ಬೃಹತ್ ಅಗಿ ಬೆಳೆದಿರುವ ಮಾಧ್ಯಮ ತುಂಬಾ ಸಣ್ಣ ಪ್ರಮಾಣದಲ್ಲಿ ಸಮಾಜ ಸುಧಾರಣೆ ತರಲು ಆಗದೇ ಒದ್ದಾಡುತ್ತಿದೆ. ಸರ್ಕಾರಗಳ ತುತ್ತೂರಿಯಾಗಿದೆ. ಮಾಧ್ಯಮಗಳ ಕಾರ್ಪೋರೇಟ್‌ಒಡೆತನ ಮತ್ತು ಸಂಪಾದಕ ಸ್ಥಾನಗಳಲ್ಲಿ ಕೇವಲ ಉನ್ನತಜಾತಿಯ ಜನರ ಏಕಸ್ವಾಮ್ಯತೆಯಿಂದಾಗಿ ಸಮಾಜದ ಜ್ವಲಂತ ಸಮಸ್ಯೆಗಳು ವರದಿಯಾಗುವುದಿಲ್ಲ. ಕೇವಲ ಶ್ರೀಮಂತರ, ಉಳ್ಳವರ ಸಂಬಂಧಿ ವಿಷಯಗಳು, ಅವರ ಅಗತ್ಯಗಳನ್ನು ಪೂರೈಸುವ ವರದಿಗಳನ್ನು ನೀಡುತ್ತಿರುವ ಮಾಧ್ಯಮಗಳು ಮ್ಯಾಕ್‌ಡೊನಾಲ್ಡೈಸೇಶನ್‌ಆಫ್ ಮೀಡಿಯಾ ಪ್ರಕ್ರಿಯೆಗೆ ಒಳಗಾಗಿವೆ ಎಂದು ತಿಳಿಸಿದರು.

1 thought on “ಕಾರ್ಪೊರೇಟ್ ಹಿಡಿತದಲ್ಲಿ ಭಾರತದ ಮಾಧ್ಯಮ ನರಳುತ್ತಿದೆ: ಪತ್ರಕರ್ತ ಪಿ. ಸಾಯಿನಾಥ್‌ ಕಳವಳ

  1. ನಮ್ಮನ್ನು ಆಳುವ ಮತ್ತು ಹಾಳು ಮಾಡುವ ಜನಗಳಿಂದ ಎಚ್ಚರಿಕೆ ಆಗಿ ಇರಲು ಮಾದ್ಯಮಗಳು ಮುಂದಾಗಬೇಕು,

Leave a Reply to Shivaraju b iyer Cancel reply

Your email address will not be published. Required fields are marked *

error: Content is protected !!