ಉಡುಪಿ: ಬೈಕ್’ಗೆ ಕಾರು ಡಿಕ್ಕಿ- ಮೆಡಿಕಲ್ ಶಾಪ್ ಮಾಲಕ ಸಾವು

ಉಡುಪಿ, ಮಾ.25(ಉಡುಪಿ ಟೈಮ್ಸ್ ವರದಿ): ಕಡಿಯಾಳಿ ಸಮೀಪ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ  ಪರ್ಕಳದ ಹೃದಯಭಾಗದಲ್ಲಿರುವ ಮೆಡಿಕಲ್ ಶಾಪ್ ನ ಮಾಲಕ ವಾಮನ ನಾಯಕ್ ಅವರು ಮೃತಪಟ್ಟಿದ್ದಾರೆ.

ವಾಮನ ನಾಯಕ್ ಅವರು ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ಕೆಲಸಕ್ಕಾಗಿ ತಮ್ಮ ಮಗನನ್ನು ಉಡುಪಿಯಲ್ಲಿ ಬಿಟ್ಟು ಬೈಕ್ ನಲ್ಲಿ ಪರ್ಕಳದ ತಮ್ಮ ಮನೆಗೆ ವಾಪಾಸ್ಸಾಗುತ್ತಿದ್ದರು. ಈ ವೇಳೆ ಕಡಿಯಾಳಿ ಸಮೀಪ ವೇಗವಾಗಿ ಬಂದ ವಿದ್ಯಾರ್ಥಿನಿಯೊಬ್ಬರು‌ ಚಲಾಯಿಸುತ್ತಿದ್ದ ಕಾರು ಇವರ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಉಡುಪಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಸ್ಪತ್ರೆಯಲ್ಲಿ ಅವರು‌ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಮಗ, ಮಗಳನ್ನು ಅಗಲಿದ್ದಾರೆ.

ಇವರು ಉತ್ತಮ ಭಜನೆ, ಭಕ್ತಿಗೀತೆ ಹಾಡುತ್ತಿದ್ದರು ಹಾಗೂ ಸಂಗೀತದ ಪರಿಕರಗಳನ್ನು ನುಡಿಸುತ್ತಿದ್ದರು,  ಉಡುಪಿಯ ಸುತ್ತಮುತ್ತ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಾಡುವ ಮೂಲಕ  ಜನಮನ್ನಣೆ ಗಳಿಸಿದ್ದರು.ಅಪಘಾತದ ಬಳಿಕ ಡಿಕ್ಕಿ ಹೊಡೆದ ಕಾರು ಚಲಾಯಿಸುತ್ತಿದ್ದ ವಿದ್ಯಾರ್ಥಿನಿ ಕಾರಿನಿಂದ ಇಳಿದು ವಾಮನ ನಾಯಕ್ ಅವರು ಗಂಭೀರ ಗಾಯಗೊಂಡಿದ್ದನ್ನು‌ ಕಂಡು ವಾಪಾಸ್ಸು ಕಾರಿನಲ್ಲಿ ಸ್ಥಳದಿಂದ ತೆರಳಿದ್ದಾಳೆ ಎಂದು ಸಾರ್ವಜನಿಕರು ಹೇಳಿದ್ದಾರೆ. ಬಳಿಕ ಕಾರಿನ ನಂಬರ್ ಪಡೆದು ಅಪಘಾತ ನಡೆಸಿದ ವಿದ್ಯಾರ್ಥಿನಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!