ಕಾರ್ಕಳ: ಕೊರಗಜ್ಜನ ವೇಷ ಹಾಕಿ ಅಪಹಾಸ್ಯ-ದೂರು ದಾಖಲು
ಕಾರ್ಕಳ ಜ.20 (ಉಡುಪಿ ಟೈಮ್ಸ್ ವರದಿ): ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ವ್ಯಕ್ತಿಯೊಬ್ಬರ ಮೇಲೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಗ್ಗೆ ಚೇತನ್ ಎಂಬವರು ರವೀಂದ್ರ ಎಂಬವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಜ.18 ರಂದು ಚೇತನ್ ಅವರ ಸ್ನೇಹಿತ ಯೋಗೀಶ ಎಂಬಾತನ ಮೊಬೈಲ್ ಗೆ ಬಂದ ಸ್ಟೇಟಸ್ ನಲ್ಲಿ ಈದುವಿನ ರವೀಂದ್ರ ಎಂಬವನು ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿರುವುದು ಕಂಡು ಬಂದಿದೆ.
ರವೀಂದ್ರನು ಮೊಬೈಲಿನಲ್ಲಿ ಸ್ವಾಮಿ ಕೊರಗಜ್ಜನ ಬಗ್ಗೆ ಅಪಹಾಸ್ಯ ಮಾಡಿ ಸ್ಟೇಟಸ್ ಹಾಕಿಕೊಂಡಿದ್ದರಿಂದ ದೂರುದಾರರ ಧಾರ್ಮಿಕ ಭಾವನೆಗೆ ನೋವಾಗಿದ್ದು, ಈ ಬಗ್ಗೆ ರವೀಂದ್ರನಿಗೆ ಕರೆ ಮಾಡಿ ವಿಚಾರಿಸಿದಾಗ ರವೀಂದ್ರನು ತಾನು ಕೊರಗಜ್ಜನ ಬಗ್ಗೆ ಸ್ಟೇಟಸ್ ಹಾಕಿದ್ದೇನೆ ಎನಾಯ್ತು, ಮುಂದೆಯೂ ಇದಕ್ಕಿಂತ ಹೆಚ್ಚಿನ ರೀತಿಯ ವೇಷ ಹಾಕಿ ಸಂಭ್ರಮಿಸುತ್ತೇನೆ ಎಂದು ಮರು ಉತ್ತರ ನೀಡಿದ್ದಾನೆ. ಅದರಂತೆ ರವೀಂದ್ರನು ಸ್ವಾಮಿ ಕೊರಗಜ್ಜನ ವೇಷ ಹಾಕಿ ಅಪಹಾಸ್ಯ ಮಾಡಿ ಧಾರ್ಮಿಕ ಭಾವನೆ ಹಾಗೂ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.