ಬೈಂದೂರು: ಕೆವೈಸಿ ಮಾಹಿತಿ ಸರಿಪಡಿಸುವುದಾಗಿ ನಂಬಿಸಿ 3.89 ಲಕ್ಷ ರೂ.ವಂಚನೆ
ಬೈಂದೂರು ನ.10(ಉಡುಪಿ ಟೈಮ್ಸ್ ವರದಿ): ಬ್ಯಾಂಕ್ ಖಾತೆಯ ಕೆವೈಸಿ ಮಾಹಿತಿಯನ್ನು ಸರಿಪಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೈಂದೂರಿನ ಮರವಂತೆ ಗ್ರಾಮದಲ್ಲಿ ನಡೆದಿದೆ.
ಈ ಬಗ್ಗೆ ವಂಚನೆಗೆ ಒಳಗಾದ ಎಂ.ಶಂಕರ ಖಾರ್ವಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಎಂ. ಶಂಕರ ಖಾರ್ವಿ ಅವರು ಮರವಂತೆ ಹಾಗೂ ನಾವುಂದದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ 3 ಖಾತೆಗಳನ್ನು ಹೊಂದಿದ್ದಾರೆ. ನಿನ್ನೆ ಸಂಜೆ ವೇಳೆ ಇವರ ಮೊಬೈಲ್ ಸಂಖ್ಯೆಗೆ ಕೆವೈಸಿ ಮಾಹಿತಿಯನ್ನು ಸರಿಪಡಿಸಲು ಸಂದೇಶ ಬಂದಿತ್ತು. ನಂತರ ದೂರುದಾರರಿಗೆ ಅಪರಿಚಿತ ವ್ಯಕ್ತಿಗಳು ಬ್ಯಾಂಕಿನ ಅಧಿಕಾರಿಗಳ ಹೆಸರಿನಲ್ಲಿ ಕರೆಮಾಡಿ ನಂಬಿಸಿ ಎಸ್.ಬಿ ಖಾತೆಗೆ ಸಂಬಂದಿಸಿದ ಕೆವೈಸಿ ಮಾಹಿತಿ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸಿಲು ಎಟಿಎಮ್ ಕಾರ್ಡಿನ ನಂಬ್ರವನ್ನು ಕೇಳಿದ್ದರು. ಅದನ್ನು ನಂಬಿದ ದೂರುದಾರರು ತನ್ನಲ್ಲಿರುವ ಎರಡು ಎಟಿಎಂ ಕಾರ್ಡಿನ ನಂಬರ್ ಹಾಗೂ ತನ್ನ ಮೊಬೈಲ್ ಗೆ ಬಂದ ಒಟಿಪಿಯನ್ನು ಅಪರಿಚಿತ ವ್ಯಕ್ತಿಗೆ ನೀಡಿದ್ದಾರೆ. ಇದೇ ರೀತಿ ಆತನು 5 ಬಾರಿ ಒಟಿಪಿ ಪಡೆದು ಒಟ್ಟು 3,89,423 ರೂ. ಹಣವನ್ನು ದೂರುದಾರರ ಖಾತೆಯಿಂದ ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್’ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.