ರಾಜ್ಯದಲ್ಲಿರುವ ಚರ್ಚ್’ಗಳ ಸಮೀಕ್ಷೆ- ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಬೆಂಗಳೂರು ಅ.26 : ರಾಜ್ಯದಲ್ಲಿರುವ ಚರ್ಚ್‍ಗಳ ಸಮೀಕ್ಷೆ ವಿಚಾರವಾಗಿ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ. ರಾಜ್ಯದಲ್ಲಿರುವ ಚರ್ಚ್‍ಗಳ ಸಮೀಕ್ಷೆ ನಡೆಸಲು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪರಿಶೀಲಿಸಿದ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಕರ್ನಾಟಕದ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರ ಕೇವಲ ಅಂಕಿ ಅಂಶ ಸಂಗ್ರಹಿಸುತ್ತಿದೆ. ಇದು ಅಲ್ಪಸಂಖ್ಯಾತರ ಅಭಿವೃದ್ಧಿಗೂ ಇರಬಹುದು. ಸರ್ವೆಯಿಂದ ಅಲ್ಪಸಂಖ್ಯಾತರ ಯಾವ ಹಕ್ಕು ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ.

ಚರ್ಚ್‍ಗಳು ಇರುವ ವಿಳಾಸ, ಪ್ರಾರ್ಥನಾ ಮಂದಿರ ಇರುವ ಸರ್ವೆ ನಂಬರ್, ಖಾತೆ ಸಂಖ್ಯೆ, ಅಲ್ಲಿರುವ ಪಾದ್ರಿ ಸೇರಿ ಎಲ್ಲಾ ಮಾಹಿತಿ ಕಲೆ ಹಾಕಲು 2021ರ ಜುಲೈ 7 ಮತ್ತು 9 ರಂದು ಆದೇಶಿಸಲಾಗಿದೆ. ಇದು ಅಲ್ಪಸಂಖ್ಯಾತ ಸಮುದಾಯದ ವಿರುದ್ಧದ ತಾರತಮ್ಯ ಮತ್ತು ಕಿರುಕುಳದ ಕ್ರಮ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹಾಗೂ ಶಾಸಕರೊಬ್ಬರ ಮನವಿಯಂತೆ ಅಂಕಿ ಅಂಶ ಸಂಗ್ರಹಿಸಲಾಗುತ್ತಿದೆ. ಮತಾಂತರ ಕಾರಣ ನೀಡಿ ಚರ್ಚ್‍ಗಳ ಸರ್ವೆ ನಡೆಸಲಾಗುತ್ತಿದೆ. ಖಾಸಗಿತನದ ಹಕ್ಕು ಉಲ್ಲಂಘನೆಯಾಗಿದೆ ಎಂದು ವಾದ ಮಾಡಲಾಗಿದೆ. ಚರ್ಚ್ ಗಳ ಸರ್ವೆ ಆದೇಶಕ್ಕೆ ತಡೆ ನೀಡಲು ಮನವಿ ಮಾಡಲಾಗಿದೆ.

ರಾಜ್ಯದಲ್ಲಿ ಚರ್ಚ್ ಗಳ ಸರ್ವೆಗೆ ಸರ್ಕಾರ ನಿರ್ಧಾರ ಹಿನ್ನೆಲೆ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ದಾಖಲಾಗಿದೆ. ಪಿಯುಸಿಎಲ್ ಸಂಸ್ಥೆಯಿಂದ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸರ್ಕಾರ ಕೇವಲ ಚರ್ಚ್ ಗಳ ಸರ್ವೆ ನಡೆಸುತ್ತಿದೆ. ಕ್ರೈಸ್ತರ ವಿರುದ್ಧ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದ ಮಂಡಿಸಿದ್ದಾರೆ.

ಈ ಸಮೀಕ್ಷೆ ಮೂಲಕ ಚರ್ಚ್‍ಗಳ ಒಳಕ್ಕೆ ನುಸುಳುವಿಕೆಯಷ್ಟೇ ಅಲ್ಲ. ಧಾರ್ಮಿಕ ಅಲ್ಪಸಂಖ್ಯಾತರ ಖಾಸಗಿತನದ ಮೂಲಭೂತ ಹಕ್ಕಿನ ವಿರುದ್ಧದ ಗಂಭೀರ ಹಸ್ತಕ್ಷೇಪ. ಸರ್ವೆಗೆ ಹೊರಡಿಸಿರುವ ಆದೇಶವು ಕಾನೂನು ಬಾಹಿರ ಮತ್ತು ಸಂವಿಧಾನದ 41 ಮತ್ತು 21ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಿರುವ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ದೂರಲಾಗಿದೆ.

Leave a Reply

Your email address will not be published. Required fields are marked *

error: Content is protected !!