ಗಂಗೊಳ್ಳಿ: ಅಡಿಕೆ ವ್ಯಾಪಾರಿ ನಾಪತ್ತೆ

ಗಂಗೊಳ್ಳಿ ಅ.15 (ಉಡುಪಿ ಟೈಮ್ಸ್ ವರದಿ): ತಂದೆಯ ಸೂತಕದ ಪೂಜೆ ಮುಗಿಸಲು ತೆರಳಿದ ತಾಯಿ, ಮಗ ಇಬ್ಬರು ನಾಪತ್ತೆಯಾಗಿರುವ ಘಟನೆ ತ್ರಾಸಿ ಗ್ರಾಮದಲ್ಲಿ ನಡೆದಿದೆ.

ವಿವೇಕ್ ಹಾಗೂ ಅವರ ತಾಯಿ ಭಾಗ್ಯ ನಾಪತ್ತೆಯಾಗಿರುವವರು. ಈ ಬಗ್ಗೆ ತುಮಕೂರಿನ ಜಾಫರ್ ಖಾನ್ ಜಿ.ಎಸ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಜಾಫರ್ ಅವರು ಅ.12 ರಂದು ಬೆಳಿಗ್ಗೆ ವಿವೇಕ್ ಹಾಗೂ ಅವರ ತಾಯಿ ಭಾಗ್ಯ ರವರೊಂದಿಗೆ ಮನೆಯಿಂದ ಹೊರಟು ಆದಿಚುಂಚನಗಿರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಹೊರಟಿಸಿದ್ದರು. ಈ ವೇಳೆ ವಿವೇಕ್ ಅವರು ತಮ್ಮ ಮೊಬೈಲ್ ನ್ನು ಆಫ್ ಮಾಡಿದ್ದರು. ಅ.13 ರಂದು ಕಾರವಾರದಿಂದ ವಾಪಸ್ಸಾಗುತ್ತಿದ್ದ ವೇಳೆ ತ್ರಾಸಿಯಿಂದ ಸುಮಾರು 15 ಕಿ.ಮೀ ಹಿಂದೆ ಜಾಫರ್ ಖಾನ್ ಜಿ.ಎಸ್ ರವರಿಗೆ ನಿದ್ರೆ ಬರುತ್ತಿದ್ದ ಕಾರಣ ವಿವೇಕ್ ರವರು ಕಾರನ್ನು ಚಲಾಯಿಸಲಾರಂಭಿಸಿದ್ದರು.

ಬೆಳಗ್ಗೆ ಕುಂದಾಪುರದ ತ್ರಾಸಿ ಗ್ರಾಮದ ತ್ರಾಸಿ ಪೆಟ್ರೋಲ್ ಬಂಕ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಕಾರು ನಿಲ್ಲಿಸಿ ಜಾಫರ್ ಖಾನ್ ಜಿ.ಎಸ್ ರವರನ್ನು ಎಬ್ಬಿಸಿ ತಂದೆಯ ಸೂತಕ ಪೂಜೆ ಮುಗಿಸಿಕೊಂಡು ಬರುವುದಾಗಿ ಹೇಳಿದ್ದರು. ಹಾಗೂ ಮಧ್ಯಾಹ್ನ 1 ಗಂಟೆಗೆ ಮೊಬೈಲ್ ಸ್ವಿಚ್ ಆನ್ ಮಾಡುವಂತೆ ತಿಳಿಸಿ ತಾಯಿಯೊಂದಿಗೆ ಹೊರಟಿದ್ದರು. ಬಳಿಕ ಮಧ್ಯಾಹ್ನ 1 ಗಂಟೆಗೆ ಮೊಬೈಲ್ ಆನ್ ಮಾಡಿದಾಗ ವಿವೇಕ್ ಅವರ ಕಾಲ್ ಬಂದಿರುವುದಿಲ್ಲ. ಸಂಜೆಯಾದರೂ ಇಬ್ಬರೂ ವಾಪಸ್ಸು ಬಾರದ ಕಾರಣ ವಿವೇಕ್ ರವರ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದರು.

ಜಾಫರ್ ಖಾನ್ ಜಿ.ಎಸ್ ರವರು ರಾತ್ರಿಯೆಲ್ಲಾ ಹುಡುಕಾಡಿದರೂ ಇಬ್ಬರೂ ಇದುವರೆಗೂ ಪತ್ತೆಯಾಗಿರುವುದಿಲ್ಲ. ವಿವೇಕ್ ರವರು ಅಡಿಕೆ ವ್ಯಾಪಾರಸ್ಥರಾಗಿದ್ದು ವ್ಯವಹಾರದಲ್ಲಿ ನಷ್ಟ ಉಂಟಾಗಿ ಹಣದ ಅಡಚಣೆಯಿಂದ ಯಾರಿಗೂ ಹೇಳದೇ ಎಲ್ಲಿಯೋ ಹೋಗಿ ಕಾಣೆಯಾಗಿರುವುದಾಗಿ ಅಭಿಪ್ರಾಯವಿರುವುದಾಗಿ ಜಾಫರ್ ಖಾನ್ ಜಿ.ಎಸ್ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Leave a Reply

Your email address will not be published. Required fields are marked *

error: Content is protected !!