ಬಿಜೆಪಿ ಸಂಘಟನೆ, ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ: ಅಮಿತ್ ಶಾ ಗೆ ರಕ್ಷಣಾ ಖಾತೆ?

ನವದೆಹಲಿ: ಜಗತ್ ಪ್ರಕಾಶ್ ನಡ್ಡಾ ಅವರು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಬಳಿಕ ಮಹತ್ವದ ಸಂಘಟನಾತ್ಮಕ ಬದಲಾವಣೆಯಾಗುತ್ತಿದ್ದು, ಮತ್ತಷ್ಟು ಬದಲಾವಣೆಗೆ ಪಕ್ಷ ಅಣಿಯಾಗಿದೆ. 

ರಾಜ್ಯಸಭಾ ಚುನಾವಣೆ ಮುಕ್ತಾಯಗೊಂಡಿದ್ದು, ಕೋವಿಡ್-19 ನಿರ್ಬಂಧಗಳೂ ತೆರವಾಗುತ್ತಿರುವುದರಿಂದ ರಾಜಕೀಯ ಚಟುವಟಿಕೆಗಳು ಮತ್ತೆ ಗರಿಗೆದರಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಬಿಜೆಪಿ ಸಂಘಟನೆಗೆ ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹರ್ಯಾಣ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ತಮಿಳುನಾಡುಗಳಿಂದ ನಾಯಕರಿಗೆ ಜವಾಬ್ದಾರಿ ನೀಡಲು ಜೆಪಿ ನಡ್ಡಾ ಉತ್ಸುಕರಾಗಿದ್ದಾರೆ. ಹೊಸದಾಗಿ ಸೇರ್ಪಡೆಯಾಗಲಿರುವ ನಾಯಕರ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿಗೆ ಕಳಿಸಿದ್ದಾರೆ. ಈ ಬೆನ್ನಲ್ಲೇ ಈ ಸಂಘಟನಾತ್ಮಕ ಬದಲಾವಣೆಗಳ ಜೊತೆಗೆ ಕೇಂದ್ರ ಸಚಿವ ಸಂಪುಟದಲ್ಲಿಯೂ ಮಹತ್ವದ ಬದಲಾವಣೆಗಳಾಗಲಿವೆ ಎಂಬ ವದಂತಿ ಹಬ್ಬಿದೆ.

ಈ ನಡುವೆ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯದ ಲಾಭ ಪಡೆದು ಶಿವಸೇನೆ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದಕ್ಕೆ ತಂತ್ರರೂಪಿಸುತ್ತಿದೆ. ಆದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದು ವೇಳೆ ಶಿವಸೇನೆಗೇ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ಟರೆ ಉದ್ಧವ್ ಠಾಕ್ರೆ ಪದವಿಯಲ್ಲಿ ಮುಂದುವರೆಯಲಿದ್ದು, ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿರುವ ದೇವೇಂದ್ರ ಫಡ್ನವೀಸ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸಲಾಗುತ್ತದೆ. ಇದೇ ರೀತಿ ಮಧ್ಯಪ್ರದೇಶದಲ್ಲಿಯೂ ರಾಜ್ಯ ನಾಯಕರನ್ನು ರಾಷ್ಟ್ರರಾಜಕಾರಣಕ್ಕೆ ಕಳುಹಿಸಲು ಚಿಂತನೆ ನಡೆಸಲಾಗಿದೆ.

ಇನ್ನು ಮಹತ್ವದ ಬದಲಾವಣೆಯೊಂದರಲ್ಲಿ ಕೇಂದ್ರ ಗೃಹ ಸಚಿವರಾಗಿರುವ ಅಮಿತ್ ಶಾ ಅವರಿಗೆ ರಕ್ಷಣಾ ಖಾತೆ ಹೊಣೆಗಾರಿಕೆ ನೀಡಲಾಗುತ್ತದೆ ಎಂಬ ವದಂತಿ ಹಬ್ಬಿರುವುದರ ಬಗ್ಗೆ ಬ್ಯುಸಿನೆಸ್ ಸ್ಟಾಂಡರ್ಡ್ ವರದಿ ಪ್ರಕಟಿಸಿದೆ. ಸಂಸತ್ ನ ಮುಂಗಾರು ಅಧಿವೇಶನ ವರ್ಚ್ಯುಯಲ್ ಆಗಿ ನಡೆಯುವ ಸಾಧ್ಯತೆ ಇದ್ದು, ಇದಕ್ಕೂ ಮುನ್ನ ಬಿಜೆಪಿ ಸಂಘಟನೆ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!