ಉಡುಪಿ: 32 ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ನಾರಾಯಣಗೌಡ ಶಂಕು ಸ್ಥಾಪನೆ
ಉಡುಪಿ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಯಲು ರಂಗ ಮಂದಿರ ನಿರ್ಮಾಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನಾ ಕಾರ್ಯಕ್ರಮ ಮಟ್ಟಾರುವಿನಲ್ಲಿ ನಡೆಯಿತು. ಈ ವೇಳೆ 32 ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಡಾ.ಕೆ.ಸಿ. ನಾರಾಯಣ ಗೌಡ ಶಂಕು ಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ಇಂದು ಶಂಕು ಸ್ಥಾಪನೆ ನಡೆದ ಕಾಮಗಾರಿಗಳು ಶೀಘ್ರವಾಗಿ ಆರಂಭಗೊಳ್ಳಲಿ. ಸೌಲಭ್ಯ ಅಭಿವೃದ್ಧಿಗೆ 50 ಲಕ್ಷ ಕ್ರೀಡಾಂಗಣ ಅಭಿವೃದ್ಧಿಗೆ 25 ಲಕ್ಷ ನೀಡಲಾಗಿದ್ದು ಅದನ್ನು ಶೀಘ್ರವನ್ನು ತರಲಾಗುವುದು ಎಂದರು. ತೋಟಗಾರಿಕೆ, ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್ ಅಭೀವೃದ್ಧಿ ಬಗ್ಗೆ ಚಿಂತನೆ ಇಟ್ಟುಕೊಂಡಿದ್ದು, ಅದು ಶೀಘ್ರದಲ್ಲಿ ನೆರವೇರಲಿದೆ.
ನಮ್ಮ ರಾಜ್ಯದಲ್ಲಿ 2 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದು ಅವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು. ಹಳ್ಳಿ ಹಳ್ಳಿಗೂ ತೆರಳಿ ಅಲ್ಲಿರುವ ಯುವಕರನ್ನು ಗುರುತಿಸಿ ಅವರ ಪ್ರತಿಬೆಯನ್ನು ಗುರುತಿಸಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಸಣ್ಣ ಕೈಗಾರಿಕೆ, ಉದ್ಯಮವನ್ನು ಸೃಷ್ಟಿಸುವ ಕಾರ್ಯಕ್ರಮಗಳನ್ನು ಮಾಡುವ ಕೆಲಸ ಆಗಬೇಕಿದೆ ಎಂದರು.
ಇದೇ ವೇಳೆ ಈ ಭಾರಿ ಭಾರತದ ಖೆಲೋ ಇಂಡಿಯಾ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದ ಅವರು, ಕ್ರಿಡಾ ಕ್ಷೇತ್ರದಲ್ಲಿ ದೇಶವನ್ನು ಮೊದಲ ಸ್ಥಾನಕ್ಕೆ ತರಬೇಕು ಎಂಬ ಪ್ರಧಾನಿಗಳ ಕನಸಾಗಿದ್ದು, ಅದರ ಸಾಕಾರಕ್ಕಾಗಿ ಎಲ್ಲರ ಸಹಕಾರ ಬೇಕಗಿದೆ. ಅದಕ್ಕಾಗಿ ಹಳ್ಳಿಗಳಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ ಅವರನ್ನು ಸ್ಪರ್ಧೆಗಳಿಗೆ ಅಣಿಗೊಳಿಸುವ ಪ್ರಯತ್ನ ಆಗಬೇಕು. ಆಗ ಮಾತ್ರ ನಮ್ಮ ದೇಶ, ರಾಜ್ಯ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಗೀತಾಂಜಲಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.