ಕೋಳಿಜ್ವರ ರೋಗದ ನಿಯಂತ್ರಣದ ಬಗ್ಗೆ ಎಚ್ಚರವಹಿಸಿ: ಜಿಲ್ಲಾಧಿಕಾರಿ

ಮಂಗಳೂರು ಜ.7: ಕೋಳಿಶೀತ ಜ್ವರದ ರೋಗದ ಬಗ್ಗೆ ಸಾರ್ವಾಜನಿಕರಲ್ಲಿ ಅರಿವು ಮೂಡಿಸುವುದರೊಂದಿಗೆ ರೋಗ ಹರಡದಂತೆ ಅಗತ್ಯ ಮುನ್ನೆಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಸೂಚಿಸಿದರು.
ಅವರು ಮಂಗಳವಾರ ತಮ್ಮ ಕಛೇರಿ ಸಭಾಂಗಣದಲ್ಲಿ ಕೋಳಿಜ್ವರ ರೋಗದ ಹರಡುವಿಕೆ ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಕ್ಕದ ರಾಜ್ಯವಾದ ಕೇರಳದ ಕೊಟ್ಟಾಯಂ ಮತ್ತು ಅಲಾಪುಳ್ಳ ಜಿಲ್ಲೆಯಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ ಹಕ್ಕಿಜ್ವರ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಈ ರೋಗ ಹರಡುವ ಸಾಧ್ಯತೆ ಇದ್ದು, ಇದರ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಗೆ ಕೇರಳ ರಾಜ್ಯದಿಂದ ಬರುವ ಎಲ್ಲಾ ರೀತಿಯ ಕುಕ್ಕುಟ ಮತ್ತು ಕುಕ್ಕುಟ ಉತ್ಪನ್ನಗಳ ಸಾಗಾಣಿಕೆಯನ್ನು ನಿರ್ಬಂಧಿಸಬೇಕು ಎಂದ ಅವರು ಕೇರಳ ರಾಜ್ಯಕ್ಕೆ ಜಿಲ್ಲೆಯಿಂದ ರವಾನಿಸುವ ಕುಕ್ಕುಟ ಹಾಗೂ ಕುಕ್ಕುಟ ಉತ್ಪನ್ನಗಳ ವಾಹನಗಳನ್ನು ರಾಜ್ಯ ಮಟ್ಟದ ಗಡಿ ಭಾಗದಲ್ಲಿ ನಂಜು ನಾಶಕ ಔಷಧ ಸಿಂಪಡಿಸಬೇಕು ಎಂದರು.

ಜಿಲ್ಲೆಯ ಎಲ್ಲಾ ಕುಕ್ಕುಟ ಕ್ಷೇತ್ರಗಳಲ್ಲಿ ವಿಶೇಷವಾಗಿ ಪಕ್ಷಿಧಾಮ, ನೀರು ಸಂಗ್ರಹ ಸ್ಥಳಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು, ಕೋಳಿ ಫಾರಂಗಳಲ್ಲಿ ಸ್ವಚ್ಛತೆಗೆ ಮಾಲೀಕರು ಅಗತ್ಯ ಕ್ರಮ ವಹಿಸುವುದರ ಜೊತೆಗೆ ಅನಗತ್ಯವಾಗಿ ಜನರ ಓಡಾಟವನ್ನು ನಿರ್ಬಂಧಿಸಬೇಕು ಎಂದರು. ಕೋಳಿಗಳಲ್ಲಿ ಯಾವುದೇ ರೀತಿಯ ಅಸಹಜ ಸಾವು ಹಾಗೂ ಹಕ್ಕಿ ಜ್ವರ ಲಕ್ಷಣ ಕಂಡುಬಂದ್ದಲ್ಲಿ ತಕ್ಷಣವೇ ಹತ್ತಿರದ ಪಶುವೈದ್ಯಕೀಯ ಸಂಸ್ಥೆಗೆ ಮಾಹಿತಿ ನೀಡಬೇಕು ಎಂದರು. ಆ ರೋಗದ ಪರಿಶೀಲನೆ ಮತ್ತು ರೋಗದ ಕಣ್ಗಾವಲನ್ನು ನಿಗಾ ವಹಿಸಲು ಜಿಲ್ಲೆಯಲ್ಲಿರುವ ಕೋಳಿ ಫಾರಂಗೆ ಪಶುಪಾಲನಾಧೀಕಾರಿಗಳು ಆಗಿಂದ್ದಾಗೆ ಭೇಟಿ ನೀಡಬೇಕೆಂದು ಸೂಚನೆ ನೀಡಿದರು. ಸಭೆಯಲ್ಲಿ ಪಶು ಇಲಾಖೆಯ ಉಪನಿರ್ದೇಶಕ ಪ್ರಸನ್ನ ಕುಮಾರ್ ಹಾಗೂ ಪ್ರಾದೇಶಿಕ ಸಂಶೋಧನಾ ಅಧಿಕಾರಿ ವಸಂತ ಶೆಟ್ಟಿ ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!