ರಾತ್ರಿ ಕರ್ಫ್ಯೂನ ಮಾರ್ಗ ಸೂಚಿಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ: ಕಮಿಷನರ್ ಖಡಕ್ ವಾರ್ನಿಂಗ್

ಬೆಂಗಳೂರು: ಲಂಡನ್‍ನಲ್ಲಿ ರೂಪಾಂತರ ಕೊರೊನಾ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜಾರಿಯಾಗಿರುವ ರಾತ್ರಿ ಕರ್ಫ್ಯೂನ ಮಾರ್ಗ ಸೂಚಿಗಳನ್ನು ಪಾಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ಕಮಲ್ ಪಂಥ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ನೈಟ್ ಕರ್ಫ್ಯೂ  ನಿಯಮಗಳ ಕುರಿತು ನಗರದಲ್ಲಿ ಮಾಹಿತಿ ನೀಡಿದ ಅವರು, ಇಂದಿನಿಂದ  ಜ.1 ರ ವರೆಗೆ ರಾತ್ರಿ 11 ರಿಂದ ಬೆಳಿಗ್ಗೆ 5 ರ ತನಕ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದ್ದು, ಎಲ್ಲರೂ ನೈಟ್ ಕರ್ಫ್ಯೂ ನ ನಿಯಮಗಳನ್ನು ಪಾಲಿಸಬೇಕು. ಕೆಲವೊಂದು ತುರ್ತು ಸೇವೆಗಳು ಹೊರತು ಪಡಿಸಿ ಇತರ ಎಲ್ಲಾ ಸೇವೆ, ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

ರಾತ್ರಿ ವೇಳೆ ಇಂಡಸ್ಟ್ರೀಸ್ ಕೆಲಸ ಮಾಡಲು ಅವಕಾಶ ನೀಡಿದ್ದು, ಕಂಪನಿಯ ಐಡಿ ಇದ್ದರೆ ಓಡಾಡಲು ಅವಕಾಶ ನೀಡಲಾಗುತ್ತದೆ. ಹಾಗೂ ದೂರದ ಪ್ರಯಾಣಕ್ಕೆ ಯಾವುದೇ ತೊಂದರೆ ಇರೋದಿಲ್ಲ. ನಾಕಾಬಂದಿಯಲ್ಲಿ ಟಿಕೆಟ್ ಬುಕ್ಕಿಂಗ್ ಚೆಕ್ ಮಾಡಲಾಗುತ್ತದೆ‌. ಈ ವೇಳೆ ದೂರದ ಊರಿಗೆ ಹೋಗುವ ಪ್ರಯಾಣಿಕರು  ಟಿಕೆಟ್ ತೋರಿಸಿ ಪ್ರಯಾಣ ಬೆಳೆಸಬಹುದು ಎಂದರು. 

ಇನ್ನು, ಇಂದು ಕ್ರಿಸ್ಮಸ್ ಆಚರಣೆಗೆ ಯಾವುದೇ ಅಡ್ಡಿ ಇಲ್ಲ ಎಂದ ಅವರು, ಅನಾವಶ್ಯಕವಾಗಿ ಹೊರಗೆ ಬಂದರೆ ಕಾನೂನು ಕ್ರಮ ಕೈಗೊಂಡು ಪ್ರಕರಣ ದಾಖಲು ಮಾಡಲಾಗುತ್ತದೆ.  ರಾತ್ರಿಯಿಂದ ಬೆಳಗ್ಗೆಯವರೆಗೂ ಚೆಕ್ಕಿಂಗ್ ನಡೆಯಲಿದ್ದು, ಎಲ್ಲಾ ಪ್ಲೈ ಓವರ್ ಬಂದ್ ಮಾಡಿ, ಎಲ್ಲಾ ಕಡೆ ನಾಕಾಬಂದಿ ಹಾಕಲಾಗುತ್ತದೆ. ಮುಂಜಾಗೃತಾ ಕ್ರಮವಾಗಿ ಕೆಎಸ್ ಆರ್ ಪಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುತ್ತೆ ಎಂದರು.

ಇನ್ನು ಹೊಸ ವರ್ಷ ಆಚರಣೆ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಹೊಸ ವರ್ಷದ ಆಚರಣೆಗೆ ಯಾವುದೇ ಅವಕಾಶ ಇರೋದಿಲ್ಲ. ಬ್ಯಾರಿಕೇಡ್‍ಗಳನ್ನು ಹಾಕಿ ಚೆಕ್ಕಿಂಗ್ ಮಾಡಲಾಗುತ್ತದೆ. ಬಾರ್ ಗಳಲ್ಲಿ ಕೆಲಸ ಮಾಡುವವರು ಕೂಡ 11 ಗಂಟೆ ಒಳಗೆ ಕೆಲಸ ಮುಗಿಸಿ ಮನೆಗೆ ಸೇರಬೇಕು. ಯಾವುದೇ ಕಾರಣಕ್ಕೂ ನೈಟ್ ಕರ್ಫ್ಯೂನ ನಿಯಮ ಉಲ್ಲಂಘನೆ ಮಾಡುವಂತಿಲ್ಲ. ಒಂದು ವೇಳೆ ಅಂತಹ ಘಟನೆಗಳು ನಡೆದರೆ ನಿಯಮ ಉಲ್ಲಂಘಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Leave a Reply

Your email address will not be published. Required fields are marked *

error: Content is protected !!