₹10ಲಕ್ಷ ಸಾಲ ಪಡೆದು ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷನಿಗೆ ವಂಚನೆ- ದೂರು‌ ದಾಖಲು

ಉಡುಪಿ: ಐದು ತಿಂಗಳೊಳಗೆ ಹಣವನ್ನು ಮರಳಿಸುವುದಾಗಿ ನಂಬಿಸಿ ₹10 ಲಕ್ಷ ಸಾಲ ಪಡೆದು ವಂಚನೆ ಎಸಗಿದ ಆರೋಪದಡಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ,  ಅಂಬಲಪಾಡಿ ನಿವಾಸಿ ಸಜ್ಜನ್ ಶೆಟ್ಟಿ (34) ಅವರು ನೀಡಿದ ದೂರಿನಂತೆ, ಉದ್ಯೋಗದ ನಿಮಿತ್ತ ಸಿದ್ದಾರ್ಥ ಶೆಟ್ಟಿ ಅವರ ಪರಿಚಯವಾಗಿತ್ತು. ಬಳಿಕ ಸಿದ್ದಾರ್ಥ ಶೆಟ್ಟಿ ಅವರ ತಂದೆ ಅಮರನಾಥ್ ಶೆಟ್ಟಿ, ತಾಯಿ ಚಂದ್ರಕಲಾ ಎ. ಶೆಟ್ಟಿ, ಮಲ್ಲಿಕಾ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಹಾಗೂ ಸದಾಶಿವ ಶೆಟ್ಟಿ ಅವರ ಪರಿಚಯವೂ ಆಗಿದ್ದು, ಎಲ್ಲರೂ ಆಗಾಗ ಭೇಟಿ ಮಾಡುತ್ತಿದ್ದರು.

ಈ ವೇಳೆ ಸಿದ್ದಾರ್ಥ ಶೆಟ್ಟಿಗೆ ಹಣದ ಅಗತ್ಯವಿದೆ ಎಂದು ಹೇಳಿ, ಆರೋಪಿತರೆಲ್ಲರೂ ಸೇರಿ ಐದು ತಿಂಗಳೊಳಗೆ ಸಾಲವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿ ಪಿರ್ಯಾದಿದಾರರಿಂದ ₹10 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ.

ನಿಗದಿತ ಅವಧಿ ಕಳೆದ ಬಳಿಕ ಸಜ್ಜನ್ ಶೆಟ್ಟಿ ಅವರು ಹಣವನ್ನು ವಾಪಸ್ ಕೇಳಿದಾಗ ಆರೋಪಿತರು ವಿವಿಧ ಕಾರಣಗಳನ್ನು ನೀಡಿ ತಪ್ಪಿಸಿಕೊಳ್ಳುತ್ತಿದ್ದರು. ನಂತರ ಸಿದ್ದಾರ್ಥ ಶೆಟ್ಟಿ ಅವರು ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆಯ ಚೆಕ್ ನೀಡಿದ್ದು, ಅದನ್ನು ಬ್ಯಾಂಕ್‌ಗೆ ಜಮಾ ಮಾಡಿದಾಗ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ.

ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿತರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆರಂಭದಿಂದಲೇ ವಂಚಿಸುವ ಉದ್ದೇಶದಿಂದ ಹಣ ಪಡೆದು ಮೋಸ ಮಾಡಿರುವುದಾಗಿ ಪಿರ್ಯಾದಿದಾರರು ದೂರಿದ್ದಾರೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 85/2026ರಡಿ ಭಾರತೀಯ ದಂಡ ಸಂಹಿತೆಯ (IPC) ಕಲಂ 420 (ವಂಚನೆ), 406 (ನಂಬಿಕೆ ದ್ರೋಹ), 504 (ಉದ್ದೇಶಪೂರ್ವಕ ಅವಮಾನ) ಹಾಗೂ 506 (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!