ಉಡುಪಿ ಬಸ್ ನಿಲ್ದಾಣದಲ್ಲಿ ಚಾಕುಬೀಸಿ ಯುವತಿಯ ರಂಪಾಟ- ಕೂದಲೆಳೆಯಿಂದ ಪಾರಾದ ವಿಶು ಶೆಟ್ಟಿ ಅಂಬಲಪಾಡಿ

ಉಡುಪಿ: ಅದಾವುದೋ ಕಾರಣಕ್ಕೆ ಮಾನಸಿಕ ಕ್ಷೋಭೆಗೆ ಒಳಗಾಗಿದ್ದ 17 ವರ್ಷದ ಅಪ್ರಾಪ್ತ ಯುವತಿ ತನ್ನನ್ನು ರಕ್ಷಿಸಲು ಮುಂದಾದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರ
ಮೇಲೆಯೇ ಚಾಕು ಹಿಡಿದು ದಾಳಿ ನಡೆಸಿ ರಾದ್ಧಾಂತ ಸೃಷ್ಟಿಸಿದ ಘಟನೆ ಸೋಮವಾರ ಉಡುಪಿಯ ಬನ್ನಂಜೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಯುವತಿ ವಿಶು ಶೆಟ್ಟಿ ಅವರ ಮೇಲೆ ಚಾಕು ಬೀಸಿದ್ದು, ಕೂದಲೆಳೆಯ ಅಂತರದಲ್ಲಿ ಅವರು ಪಾರಾಗಿದ್ದಾರೆ.
ಯುವತಿಯ ರಾದ್ಧಾಂತವನ್ನು ಕಂಡು ಬೆಚ್ಚಿ ಆಕೆಯ ತಾಯಿ ಮೂರ್ಚೆ ಬಿದ್ದಿದ್ದು, ಯುವತಿಯ ತಂದೆಯ ಅಪೇಕ್ಷೆ ಮೇರೆಗೆ ಯುವತಿ ಹಾಗೂ ಆಕೆಯ ತಾಯಿ ಇಬ್ಬರನ್ನೂ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಹಿನ್ನಲೆ: ಉತ್ತರ ಕನ್ನಡ ಮೂಲದ 17 ವರ್ಷದ ಯುವತಿ ಯಾವುದೋ ಕಾರಣದಿಂದ ಮಾನಸಿಕ ಕ್ಷೋಭೆಗೆ ಒಳಗಾಗಿದ್ದಳು. ಹೆತ್ತವರ ಕಣ್ಣು ತಪ್ಪಿಸಿ ಸೋಮವಾರ ಬೆಳಗ್ಗೆ ಉಡುಪಿಗೆ ಬರುವ ಸರಕಾರಿ ಬಸ್ಸನ್ನು ಏರಿದ್ದಳು. ಸುದ್ದಿ ತಿಳಿದ ಹೆತ್ತವರು ಕಾರಿನ ಮೂಲಕ ಯುವತಿಯಿದ್ದ ಬಸ್ಸನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ವಿಶು ಶೆಟ್ಟಿಯವರು ತಕ್ಷಣ ಬನ್ನಂಜೆಯ ಸರಕಾರಿ ಬಸ್ ನಿಲ್ದಾಣಕ್ಕೆ ಧಾವಿಸಿ ಯುವತಿಯನ್ನು ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸಹಾಯದಿಂದ ತಮ್ಮ ವಶಕ್ಕೆ ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ.

ಈ ಸಂದರ್ಭದಲ್ಲಿ ತನ್ನ ಮನೋ ನಿಯಂತ್ರಣ ಕಳೆದುಕೊಂಡ ಯುವತಿ ಬ್ಯಾಗಿನಿಂದ ಚಾಕು ತೆಗೆದು ವಿಶು ಶೆಟ್ಟಿ ಮೇಲೆ ಮುಗಿಬಿದ್ದಿದ್ದಾರೆ. ಅಕಸ್ಮಾತ್ ನಡೆದ ಈ ದಾಳಿಗೆ ಕೂದಲೆಳೆಯ ಅಂತರದಲ್ಲಿ ವಿಶು ಶೆಟ್ಟಿ ಅಪಾಯದಿಂದ ಪಾರಾಗಿದ್ದಾರೆ.
ಜೀವದ ಹಂಗು ತೊರೆದು ಯುವತಿಯ ಕೈಯಲ್ಲಿದ್ದ ಚಾಕುವನ್ನು ಸೆಳೆದುಕೊಳ್ಳುವಲ್ಲಿ ವಿಶು ಶೆಟ್ಟಿ ಸಫಲರಾಗಿದ್ದಾರೆ. ಯುವತಿಯ ಆರ್ಭಟಕ್ಕೆ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಅಲ್ಲದೇ ಯುವತಿ ಮುಷ್ಟಿ ಹಿಡಿದು ಇಬ್ಬರು ಪ್ರಯಾಣಿಕರ ಮೇಲೆಯೂ ಹಲ್ಲೆ ಮಾಡಿ ಉದ್ವಿಗ್ನ ವಾತಾವರಣ ನಿರ್ಮಿಸಿದ್ದಳು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಹಿಳಾ ಠಾಣೆಯ ರಶ್ಮಿ ಹಾಗೂ ಮಕ್ಕಳ ರಕ್ಷಣಾ ಇಲಾಖೆಯ ಸುನಂದಾ ಹಾಗೂ ನಾಗರತ್ನ ನೆರವಾದರು.

ಯುವತಿಯ ಈ ಮನೋ ಸ್ಥಿತಿಗೆ ಪ್ರೇಮ ವೈಫಲ್ಯ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಯುವತಿಗೆ ಇನ್ಸ್ಟಾಗ್ರಾಮ್ ಮೂಲಕ ಹೊರ ರಾಜ್ಯದ ಯುವಕನ ಪರಿಚಯವಾಗಿದ್ದು, ನಿರಂತರ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದಳು ಎಂಬ ಮಾಹಿತಿಯನ್ನು ಯುವತಿಯ ತಂದೆ ತಿಳಿಸಿದ್ದಾರೆ.

ಹೆತ್ತವರೇ ಎಚ್ಚರಗೊಳ್ಳಿ: ಇಂದು ಮೊಬೈಲ್ ನಿಂದಾಗಿ ಯುವಕ, ಯುವತಿಯರು ದಾರಿ ತಪ್ಪುತ್ತಿದ್ದಾರೆ. ಪ್ರಮುಖವಾಗಿ ಕಾಲೇಜು ಹೋಗುತ್ತಿರುವ ಯುವಕ, ಯುವತಿಯರಲ್ಲಿ ಮೊಬೈಲ್ ಸಾಮಾನ್ಯ ಎಂಬಂತಾಗಿದೆ. ಮೊಬೈಲ್ ಕೊಡುವುದು ತಪ್ಪಲ್ಲ ಆದರೆ ಮಕ್ಕಳು ಮೊಬೈಲಿನಲ್ಲಿ ಏನು ಮಾಡುತ್ತಿದ್ದಾರೆ ಎಂಬ ಎಚ್ಚರ ಹೆತ್ತವರಿಗೆ ಇರಬೇಕು. ಪ್ರಕರಣ ಕೈ ಮೀರಿದಾಗ ಅಳುವುದಲ್ಲ. ತಮ್ಮ ಮಕ್ಕಳಿಗೆ ಸರಿಯಾದ ತಿಳುವಳಿಕೆ ನೀಡಬೇಕು. ನಿಜಾರ್ಥದಲ್ಲಿ ಪೋಷಕರಾಗಬೇಕು ಎಂದು ವಿಶು ಶೆಟ್ಟಿ ಕಿವಿ ಮಾತುಗಳನ್ನು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!