ಮಂಗಳೂರು-ಮುಂಬಯಿಗೆ ಹೆಚ್ಚುವರಿ ನಿಯಮಿತ ರೈಲು/ ವಂದೇ ಭಾರತ್ ಸ್ಲೀಪರ್ ರೈಲಿಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮನವಿ
ಮಂಗಳೂರು / ಮುಂಬಯಿ : ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಮತ್ತು ಸಮಿತಿಯ ಇತರ ಪದಾಧಿಕಾರಿಗಳು ಮೇ ೨೩ ರಂದು ಗುರುಪುರದ ಜಂಗಮಮಠದಲ್ಲಿ,ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬೇಟಿಯಾಗಿ ಮುಂಬಯಿ – ಮಂಗಳೂರು – ಮುಂಬಯಿ ನಡುವೆ ಮತ್ತೊಂದು ನಿಯಮಿತ ರೈಲು ಹಾಗೂ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸೇವೆ ಆರಂಭಿಸುವಂತೆ ಮನವಿ ಸಲ್ಲಿಸಿದರು.
ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಉಪಸ್ಥಿತಿಯಲ್ಲಿ ಮನವಿಯನ್ನು ಸಲ್ಲಿಸಿದ್ದು ಮನವಿಯನ್ನು ಸ್ವೀಕರಿಸಿದ ಸಚಿವರು, ಈ ವಿಷಯವನ್ನು ತಮ್ಮ ಮಾರ್ಗದರ್ಶನ ದಲ್ಲಿ ಮುಂದುವರಿಸಲು ಮಂಗಳೂರು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಸೂಚಿಸಿದ್ದಾರೆ.
ಶಾಸಕ ಭರತ್ ಶೆಟ್ಟಿ, ಜಂಗಮಮಠ ಹಾಗೂ ವಜ್ರದೇಹಿ ಮಠದ ಸ್ವಾಮೀಜಿಗಳು ಮಾತ್ರವಲ್ಲದೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ರಾಜ್ಯ ಸಂಯೋಜಕರಾದ ಕೆ.ಪಿ.ಜಗದೀಶ್ ಅಧಿಕಾರಿ, ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ.ಶೆಟ್ಟಿ, ಜಿಲ್ಲಾ ಸಮಿತಿ ಹಾಗೂ ಮುಂಬಯಿ ಸಮಿತಿಯ ಇತರ ಪದಾಧಿಕಾರಿಗಳು ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಮಾತ್ರವಲ್ಲದೆ ಕೇಂದ್ರ ಸಮಿತಿಯ ವತಿಯಿಂದ ಸಚಿವರು ಹಾಗೂ ಉಪಸ್ಥಿತರಿದ್ದ ಎಲ್ಲ ಗಣ್ಯರಿಗೆ ಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.





