ನೇಜಾರು: ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಬಾಲಕ ಮೃತ್ಯು
ಉಡುಪಿ: ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆರನೇ ತರಗತಿಯ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ನೇಜಾರು ಜ್ಯೋತಿನಗರ 6ನೇ ಕ್ರಾಸ್ ಸಮೀಪ ನಡೆದಿದೆ.
ಹೂಡೆಯ ಸಾಲಿಹಾತ್ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಬ್ದುಲ್ ರೆಹಮಾನ್ (12) ಮೃತದುರ್ದೈವಿ. ನೇಜಾರಿನ ಜ್ಯೋತಿ ನಗರ ಆರನೇ ಕ್ರಾಸ್ ಸಮೀಪ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಕಾರು ಬಡಿದಿದ್ದು ನಂತರ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿ ಪರಿಶೀಲಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೃತ ವಿದ್ಯಾರ್ಥಿಯ ತಾಯಿ ಶಿಕ್ಷಕಿಯಾಗಿದ್ದು ತಂದೆ ವಿದೇಶದಲ್ಲಿದ್ದಾರೆ.
ಇತ್ತೀಚಿಗೆ ಕುರಾನ್ ಕಂಠಪಾಠದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ಅಬ್ದುಲ್ ರೆಹಮಾನ್ ಅವರಿಗೆ ಬಹುಮಾನದ ರೂಪದಲ್ಲಿ ಸೈಕಲ್ ಲಭಿಸಿತ್ತು. ಸಾಲಿಹಾತ್ ಶಿಕ್ಷಣ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಈತನ ಅಗಲಿಕೆಗೆ ಸಾಲಿಹಾತ್ ಆಡಳಿತ ಮಂಡಳಿ ಆಡಳಿತಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.





