ಮಣಿಪಾಲ: ಮನೆ ದುರಸ್ತಿ ವೇಳೆ ಎದೆಗೆ ಕಲ್ಲು ತಗಲಿ ವ್ಯಕ್ತಿ ಮೃತ್ಯು
ಮಣಿಪಾಲ: ಮನೆ ದುರಸ್ತಿ ವೇಳೆ ಎದೆಗೆ ಕಲ್ಲು ತಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಉಡುಪಿ ನಿವಾಸಿ ಉಮೇಶ್ ನಾಯ್ಕ (54) ಎಂದು ಗುರುತಿಸಲಾಗಿದೆ. ಇವರು 80 ಬಡಗುಬೆಟ್ಟು ಗ್ರಾಮದ ಆದರ್ಶ ನಗರದಲ್ಲಿ ವಾಸವಾಗಿದ್ದರು.
ಭಾನುವಾರ ಸಂಜೆ ತಮ್ಮ ಹಳೆಯ ಮನೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಗೋಡೆ ಕುಸಿಯುವುದನ್ನು ಕಂಡು ತಕ್ಷಣ ಪಕ್ಕಕ್ಕೆ ಸರಿಯಲು ಯತ್ನಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಗೋಡೆಯ ಕೆಳಭಾಗದಲ್ಲಿದ್ದ ಕಲ್ಲೊಂದು ಎದೆಗೆ ತಾಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದರು. ತಕ್ಷಣ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಉಮೇಶ್ ನಾಯ್ಕ ಅವರು ಮಣಿಪಾಲ ಮಾಧವ ಕೃಪಾ ಶಾಲೆಯಲ್ಲಿ ಸ್ಟೋರ್ ಕೀಪರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





