ಬಿಜೆಪಿ ಮುಖಂಡ ಮಂಜು ಕೊಳಗೆ ಚೂರಿ ಇರಿತ ಪ್ರಕರಣ- ನಾಲ್ವರು ಆರೋಪಿಗಳ ಬಂಧನ

ಮಲ್ಪೆ: ಹಿಂದೂ ಯುವಸೇನೆಯ ಮಾಜಿ ಜಿಲ್ಲಾಧ್ಯಕ್ಷ ಮಂಜುಕೊಳಗೆ ಕಳೆದ ರಾತ್ರಿ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಗಳನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಅಮೃತ್ ಭಂಡಾರಿ, ಪ್ರಜ್ಞೇಶ್, ಪುನಿತ್ ಪೂಜಾರಿ ಮತ್ತು ಅಭೀಜಿತ್ ಬಂಧಿತರು. ಮಾರ್ಚ್ 3ರಂದು ರಾತ್ರಿ ಸುಮಾರು 9.30ಕ್ಕೆ ಮಲ್ಪೆ ಬೀಚ್ ಬಳಿ ಸಮೀಪದ ಬ್ಲೂ ವೇಲ್ಸ್ ಗೆಸ್ಟ್ ಹೌಸ್ ಬಳಿಯಲ್ಲಿ ಮರಳಿನಲ್ಲಿ ಕುಳಿತಿದ್ದ ಸಂತೋಷ್ ಎ. ಅಮೀನ್ ಹಾಗೂ ಅವರ ಸ್ನೇಹಿತರಾದ ಮಂಜುನಾಥ ಸಾಲಿಯಾನ್ (ಮಂಜುಜ ಕೊಳ), ಧನುಷ್, ಲತೀಶ್ ಮತ್ತು ವರುಣ್ ಅವರೊಂದಿಗೆ ಅಮೃತ್‌ ಭಂಡಾರಿಯ ತಂಗಿ ವಿಚಾರವಾಗಿ ತಗಾದೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಮಾತಿನ ಚಕಮಕಿ ತೀವ್ರಗೊಂಡು, ಮಂಜು ಕೊಳ ಅವರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ.

ಆರೋಪಿ ಪ್ರಜೇಶ್ ತನ್ನ ಬಳಿಯಿದ್ದ ಚಾಕುವಿನಿಂದ ಮಂಜು ಕೊಳ ಅವರ ಹೊಟ್ಟೆಯ ಎಡಭಾಗಕ್ಕೆ ಇರಿದಿದ್ದಾನೆ. ಅಲ್ಲದೆ ವರುಣ್ ಹಾಗೂ ಲತೀಶ್ ಅವರಿಗೂ ಚಾಕುವಿನಿಂದ ಗಾಯಗೊಳಿಸಲಾಗಿದ್ದು, ತಡೆಯಲು ಬಂದ ಸಂತೋಷ್, ಧನುಷ್ ಸೇರಿದಂತೆ ಇತರರ ಮೇಲೂ ಕೈಯಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆ ಕೈಗೊಂಡ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಈರಣ್ಣ ಶಿರಗುಂಪಿ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದು, ಅಪ್ರಾಪ್ತನನ್ನು ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಹಾಗೂ ಸಿಪಿಐ ರಾಮಚಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!