ಕಚೇರಿಯಲ್ಲಿ ರಾಸಲೀಲೆ: ಡಿಜಿಪಿ ರಾಮಚಂದ್ರರಾವ್ ಅಮಾನತು

ಬೆಂಗಳೂರು: ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೊ ವೈರಲ್ ಆದ ಕಠಿಣ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರನ್ನು ತಕ್ಷಣವೇ ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಸೋಮವಾರ ಮಧ್ಯಾಹ್ನದ ಹೊತ್ತಿಗೆ 10 ದಿನಗಳ ಕಡ್ಡಾಯ ರಜೆ ಮೇಲೆ ತೆರಳಿದ್ದ ರಾಮಚಂದ್ರ ರಾವ್‌ ಅವರನ್ನು ರಾತ್ರಿ ನಡೆದ ದಿಢೀರ್ ಬೆಳವಣಿಗೆಯಲ್ಲಿ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ವಿಚಾರಣೆ ಇನ್ನೂ ಬಾಕಿಯಿರುವ ಕಾರಣ ಅಮಾನತುಗೊಳಿಸಿರುವುದಾಗಿ ಸರ್ಕಾರದ ಆದೇಶದಲ್ಲಿ ತಿಳಿಸಿದೆ.

ಪ್ರಕರಣ ಹಿನ್ನೆಲೆಯೇನು?

ಕಚೇರಿಯಲ್ಲಿ ಕುಳಿತು ಪೊಲೀಸ್ ಸಮವಸ್ತ್ರದಲ್ಲೇ ರಾಮಚಂದ್ರರಾವ್​​ ಮಹಿಳೆಯನ್ನು ಅಪ್ಪಿಕೊಂಡು ಮುದ್ದಾಡುತ್ತಿರುವ ಹಸಿಬಿಸಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಚೇರ್ ಮೇಲೆ ಕುಳಿತು ಮಹಿಳೆಯನ್ನು ಅಪ್ಪಿಕೊಂಡು IPS ಅಧಿಕಾರಿ ರಾಮಚಂದ್ರ ರಾವ್ ಸರಸ ನಡೆಸಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ. ಇದು ಅವರ ಪುತ್ರಿ ರನ್ಯಾರಾವ್​ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಮೊದಲು ನಡೆದಿರುವ ಘಟನೆ ಎಂದು ಹೇಳಲಾಗುತ್ತಿದೆ.

ಅತ್ತ ಮಗಳು ರನ್ಯಾರಾವ್​ ಚಿನ್ನ ಕಳ್ಳಸಾಗಾಣಿಕೆ ಕೇಸ್​​ನಲ್ಲಿ ಸಿಕ್ಕಿ ಜೈಲುವಾಸ ಅನುಭವಿಸುತ್ತಿದ್ದರೆ ಇತ್ತ ಮಲತಂದೆಯ ರಾಸಲೀಲೆಯ ವಿಡಿಯೋ ವೈರಲ್​​ ಆಗಿರುವುದು ರಾಜ್ಯಾದ್ಯಂತ ಸದ್ದುಮಾಡಿದೆ.

ರನ್ಯಾ ರಾವ್ ಪ್ರಕರಣವೇನು?

ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಬಂಧನ ಬೆನ್ನಲ್ಲೇ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರೂ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ನಟಿ ರನ್ಯಾ ರಾವ್‌ಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆಗೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿತ್ತು. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿರಬಹುದು, ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇರಬಹುದು ಎಂದು ತನಿಖೆಗೆ ಆದೇಶ ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!