ಸಹಕಾರಿ ಬ್ಯಾಂಕ್‌‌ ಗಳನ್ನು ಉಳಿಸಲು ದೇವಸ್ಥಾನದ ಹಣವನ್ನು ಬಳಸಬಾರದು: ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಡಿ. 5: ದೇವಸ್ಥಾನಕ್ಕೆ ಸೇರಿದ ಹಣವನ್ನು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಸಹಕಾರಿ ಬ್ಯಾಂಕ್‌ ಗಳನ್ನು ಮೇಲೆತ್ತಲು ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಕೆಲವು ಸಹಕಾರಿ ಬ್ಯಾಂಕ್‌ ಗಳು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಯಮಲ್ಯ ಬಾಗ್ಚಿ ಅವರನ್ನೊಳ ನ್ಯಾಯಪೀಠವೊಂದು ಈ ಆದೇಶ ನೀಡಿದೆ.

ಕೇರಳ ಹೈಕೋರ್ಟ್ ಈ ಸಹಕಾರಿ ಬ್ಯಾಂಕ್‌ ಗಳಿಗೆ ತಿರುನೆಲ್ಲಿ ದೇವಸ್ಥಾನ ದೇವಸ್ವಮ್‌ ನ ಠೇವಣಿಗಳನ್ನು ಹಿಂದಿರುಗಿಸುವಂತೆ ಆದೇಶ ನೀಡಿತ್ತು. ಈ ಆದೇಶವನ್ನು ಬ್ಯಾಂಕ್‌ ಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.

‘‘ಬ್ಯಾಂಕನ್ನು ಉಳಿಸಲು ದೇವಸ್ಥಾನದ ಹಣವನ್ನು ಬಳಸಲು ನೀವು ಬಯಸಿದ್ದೀರಾ? ದೇವಸ್ಥಾನದ ಹಣವು ಕಷ್ಟದಲ್ಲಿ ಉಸಿರಾಡುತ್ತಿರುವ ಸಹಕಾರಿ ಬ್ಯಾಂಕ್‌ ನಲ್ಲಿ ಇರುವ ಬದಲು ಗರಿಷ್ಠ ಬಡ್ಡಿ ನೀಡಬಲ್ಲ ಆರೋಗ್ಯಕರ ರಾಷ್ಟ್ರೀಕೃತ ಬ್ಯಾಂಕೊದಕ್ಕೆ ಹೋಗಬೇಕು ಎಂಬ ಆದೇಶದಲ್ಲಿ ಏನು ತಪ್ಪಿದೆ’’ ಎಂದು ಮುಖ್ಯ ನ್ಯಾಯಾಧೀಶರು ಪ್ರಶ್ನಿಸಿದರು.

‘‘ದೇವಸ್ಥಾನದ ಹಣ ದೇವರಿಗೆ ಸೇರಿದ್ದು. ಹಾಗಾಗಿ, ಹಣವನ್ನು ರಕ್ಷಿಸಿಡಬೇಕು ಮತ್ತು ದೇವಸ್ಥಾನದ ಉದ್ದೇಶಗಳಿಗಾಗಿ ಮಾತ್ರ ಉಪಯೋಗಿಸಬೇಕು. ಅದು ಸಹಕಾರಿ ಬ್ಯಾಂಕೊಂದರ ಆದಾಯದ ಮೂಲ ಅಥವಾ ಅದನ್ನು ಉಳಿಸುವ ಸಾಧನವಾಗಬಾರದು’’ ಎಂದು ಅವರು ಹೇಳಿದರು.

ಅವಧಿ ಮುಗಿದ ಠೇವಣಿಗಳನ್ನು ಹಿಂದಿರುಗಿಸುವಂತೆ ದೇವಸ್ವಮ್ ಪದೇ ಪದೇ ಕೇಳಿಕೊಂಡರೂ, ಐದು ಸಹಕಾರಿ ಬ್ಯಾಂಕ್‌ ಗಳು ಹಣ ಹಿಂದಿರುಗಿಸಲು ನಿರಾಕರಿಸಿದ್ದವು ಎನ್ನಲಾಗಿದೆ. ದೇವಸ್ವಮ್‌ ನ ನಿರಖು ಠೇವಣಿಗಳನ್ನು ಎರಡು ತಿಂಗಳೊಳಗೆ ಹಿಂದಿರುಗಿಸು ವಂತೆ ಬಳಿಕ ಹೈಕೋರ್ಟ್ ನಿರ್ದೇಶನ ನೀಡಿತ್ತು.

Leave a Reply

Your email address will not be published. Required fields are marked *

error: Content is protected !!