ಕಡಲ-ಮುತ್ತು ಕಾದಂಬರಿಗಾರ್ತಿ ಕಣ್ವತೀರ್ಥ ಕುಶಾಲಾಕ್ಷಿರಿಗೆ ಪಣಿಯಾಡಿ ಕಾದಂಬರಿ ಪ್ರಶಸ್ತಿ
ಉಡುಪಿ: (ಉಡುಪಿ ಟೈಮ್ಸ್ ವರದಿ)ತುಳು ಭಾಷೆ, ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅನನ್ಯವಾಗಿದ್ದು, ಇಂದಿನ ಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣದೊಂದಿಗೆ ತುಳು ಭಾಷೆ ಬೆಳವಣಿಗೆ, ಸಾಹಿತ್ಯ ಚಟುವಟಿಕೆಗಳಲ್ಲಿ ವಿಶೇಷ ಅಸ್ಥೆ ವಹಿಸಬೇಕು ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರ ಆರ್.ನಾಯಕ್ ಸಲಹೆ ನೀಡಿದರು.
ತುಳುಕೂಟ ಉಡುಪಿ ವತಿಯಿಂದ ಭಾನುವಾರ ನಗರದ ಜಗನ್ನಾಥ ಸಭಾ ಭವನದಲ್ಲಿ ಜರುಗಿದ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪಣಿಯಾಡಿ ಕಾದಂಬರಿ ಪ್ರಶಸ್ತಿ ಪಡೆದ ಕಡಲ-ಮುತ್ತು ಕಾದಂಬರಿಗಾರ್ತಿ ಕಣ್ವತೀರ್ಥ ಕುಶಾಲಾಕ್ಷಿ ವಿ.ಕುಲಾಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಪನ್ಯಾಸಕಿ ಅರ್ಪಿತಾ ಶೆಟ್ಟಿ ಕಾದಂಬರಿ ಬಗ್ಗೆ ವಿಶ್ಲೇಷಣೆ ನೀಡಿದರು. 2019 -20ನೇ ಸಾಲಿನ ಎಸ್ಸೆಸ್ಸೆಲ್ಸಿ ತುಳು ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತುಳುಕೂಟ ಅಧ್ಯಕ್ಷ ವಿ.ಜಿ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಯು.ವಿಶ್ವನಾಥ ಶೆಣೈ, ತುಳುಕೂಟ ಪ್ರಮುಖರಾದ ಭಾಸ್ಕರಾನಂದ ಕುಮಾರ್, ಗಂಗಾಧರ ಕಿದಿಯೂರು, ಚೈತನ್ಯ ಎಂ.ಜಿ ಉಪಸ್ಥಿತರಿದ್ದರು. ತುಳುಕೂಟ ಸಂಚಾಲಕಿ ತಾರಾ ಉಮೇಶ್ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕ ದಯಾನಂದ್ ನಿರೂಪಿಸಿದರು.