ಸಿಎಂ ರೋಡ್ ಶೋ ವೇಳೆ ಭದ್ರತಾ ಲೋಪ: ಗನ್ ಇಟ್ಟುಕೊಂಡಿದ್ದ ವ್ಯಕ್ತಿಯಿಂದ ಸಿದ್ದರಾಮಯ್ಯಗೆ ಮಾಲಾರ್ಪಣೆ, ಆತಂಕ ಸೃಷ್ಟಿ!

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂದು ಬಿಡುವಿಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಓಡಾಡುತ್ತಿದ್ದು ಇಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಸೌಮ್ಯರೆಡ್ಡಿ ಪರ ಪ್ರಚಾರ ನಡೆಸಿದರು.

ಈ ವೇಳೆ ಭದ್ರತಾ ಲೋಪವಾಗಿದ್ದು ಗನ್ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಸಿದ್ದರಾಮಯ್ಯ, ಸಚಿವ ರಾಮಲಿಂಗಾ ರೆಡ್ಡಿ ಮತ್ತು ಅಭ್ಯರ್ಥಿ ಸೌಮ್ಯರೆಡ್ಡಿ ನಿಂತಿದ್ದ ಕ್ಯಾಂಟೆರ್ ಮೇಲೆ ಹತ್ತಿ ಸಿದ್ದರಾಮಯ್ಯ ಅವರಿಗೆ ಹೂವಿನ ಹಾರ ಹಾಕಿದ್ದಾರೆ. ಈ ವೇಳೆ ಆತನ ಸೊಟ್ಟದಲ್ಲಿ ಗನ್ ಇರುವುದು ಪತ್ತೆಯಾಗಿದೆ. ಆ ಆಗಂತುಕ ಯಾರೆಂಬುದು ಪತ್ತೆಯಾಗಿದೆ. ಸೊಂಟದಲ್ಲಿ ಗನ್ ಇಟ್ಟುಕೊಂಡಿದ್ದ ವ್ಯಕ್ತಿ ರಿಯಾಜ್ ಎಂದು ತಿಳಿದುಬಂದಿದೆ.

ಜೀವಭಯ ಕಾರಣ ರಿಯಾಜ್ ಅರ್ಜಿ ನೀಡಿ ಗನ್ ಪಡೆದುಕೊಂಡಿದ್ದನು. ಆದರೆ ಚುನಾವಣೆ ಸಮಯದಲ್ಲಿ ಗನ್ ಪೊಲೀಸ್ ಠಾಣೆಯ ವಶಕ್ಕೆ ನೀಡಬೇಕಿತ್ತು. ಇನ್ನು ಗನ್ ಸರೆಂಡರ್ ಮಾಡದಿರಲು ರಿಯಾಜ್ ಅನುಮತಿ ಪಡೆದಿದ್ದ ಎಂದು ತಿಳಿದುಬಂದಿದೆ. ಆದರೆ ಮುಖ್ಯಮಂತ್ರಿಗಳಿಗೆ Z ಭದ್ರತೆ ಇರುವುದರಿಂದ ಗನ್ ಇಟ್ಟುಕೊಂಡಿರುವ ಯಾರೇ ಆಗಲಿ ಸಿಎಂ ಬಳಿ ಹೋಗುವಂತಿಲ್ಲ.ಇನ್ನು ಸಿಎಂ ಬಳಿ ಬರುವವರನ್ನ ಭದ್ರತೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ತಪಾಸಣೆ ಮಾಡಬೇಕಿತ್ತು. ಆದರೆ ಅದನ್ನು ಪೊಲೀಸರು ಮಾಡಿಲ್ಲ. ಇದೀಗ ರಿಯಾಜ್ ಸಾರ್ವಜನಿಕವಾಗಿ ಗನ್ ಪ್ರದರ್ಶನ ಮಾಡಿದ ಆರೋಪದ ಮೇಲೆ ಗನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಗಳಿವೆ.

Leave a Reply

Your email address will not be published. Required fields are marked *

error: Content is protected !!