ರಾಜ್ಯ ಬಿಜೆಪಿಯ ಕುಟುಂಬ ರಾಜಕಾರಣ ಕೊನೆಗಾಣಿಸುವ ತನಕ ವಿರಮಿಸುವುದಿಲ್ಲ- ಕೆ.ಎಸ್ ಈಶ್ವರಪ್ಪ

ಬೈಂದೂರು: ‘ಇಷ್ಟು ದಿನ ಎಲ್ಲವನ್ನೂ ಸಹಿಸುತ್ತಾ ಬಂದ ನಾನು ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣವನ್ನು ಕೊನೆಗಾಣಿಸುವ ತನಕ ವಿರಮಿಸುವುದಿಲ್ಲ’ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನ ಉಪ್ಪುಂದದಲ್ಲಿರುವ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಇಂದು ಬೈಂದೂರು ರಾಷ್ಟ್ರ ಭಕ್ತ ಬಳಗ ವತಿಯಿಂದ ಆಯೋಜಿಸಲಾದ ಬೈಂದೂರು ಹೋಬಳಿ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.

ಹಿಂದುತ್ವಕ್ಕಾಗಿ ತಮ್ಮ ಪ್ರಾಣವನ್ನೇ ಕೊಡಲು ಸಿದ್ಧವಾಗಿದ್ದ ಬಿಜೆಪಿಯ ಅಪ್ಪಟ ಹಿಂದೂ ಕಾರ್ಯಕರ್ತರಿಗೆ ನಿರಂತರವಾಗಿ ವಂಚಿಸಲಾಗುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಹೊಂದಾಣಿಕೆ ರಾಜಕೀಯದ ಮೂಲಕ ತನ್ನ ಕುಟುಂಬ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸಂಘಟನೆಗೆ ಯಡಿಯೂರಪ್ಪನವರಷ್ಟೇ ಈ ಈಶ್ವರಪ್ಪನೂ ಕೆಲಸ ಮಾಡಿದ್ದಾನೆ ಎನ್ನುವುದನ್ನು ಯಾವ ಕಾರ್ಯಕರ್ತರೂ ಮರೆತಿಲ್ಲ. ಕೇವಲ ತಮ್ಮ ಸ್ವಾರ್ಥ ರಾಜಕೀಯ, ಕುಟುಂಬ ರಾಜಕೀಯವನ್ನೇ ಮಾಡಿಕೊಂಡು ಬಂದಿರುವ ಯಡಿಯೂರಪ್ಪನವರ ವಿರುದ್ಧ ನನ್ನ ಈ ಹೋರಾಟ ಎಂದರು.

ಈ ಚುನಾವಣೆ ಕೇವಲ ಚುನಾವಣೆಯಲ್ಲ. ಇದು ಹಣ ಬಲ ಮತ್ತು ದೇಶಭಕ್ತಿಯ ವಿರುದ್ಧದ ಸಮರ. ರಾಜಕೀಯ ಜೀವನದಲ್ಲಿ ನಾನು ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಹಿಂದುತ್ವವನ್ನು ನನ್ನ ಉಸಿರಾಗಿಸಿಕೊಂಡು ರಾಜಕೀಯ ಸಂಘಟನೆ ಮಾಡಿದೆ. ನಾಯಕರ ಒತ್ತಡಕ್ಕೆ ಮಣಿದು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕೈಬಿಟ್ಟಿದ್ದು ನಾನು ಮಾಡಿದ ಮೊದಲ ತಪ್ಪು ಎಂದ ಅವರು, ಹಿಂದುತ್ವವನ್ನು ಒಪ್ಪಿಕೊಂಡಿರುವ ಕಾರ್ಯಕರ್ತರು ನನ್ನ ಜೊತೆಗಿದ್ದಾರೆ. ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ರಾಷ್ಟ್ರಭಕ್ತ ಬಳಗ ಬೈಂದೂರಿನ ಮುಖಂಡ ಶ್ರೀಧರ ಬಿಜೂರು, ಕೊಲ್ಲೂರು ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಗೋಪಾಲ ನಾಡ, ಸುವರ್ಣ ಪೂಜಾರಿ, ಈಶ್ವರಪ್ಪ ಪುತ್ರ ಕಾಂತೇಶ್, ಮೀನುಗಾರ ಮುಖಂಡ ಯಶವಂತ ಗಂಗೊಳ್ಳಿ, ತಾಪಂ ಮಾಜಿ ಸದಸ್ಯ ನಾರಾಯಣ ಗುಜ್ಜಾಡಿ, ಪಟ್ಟಣ ಪಂಚಾಯತ್ ಸದಸ್ಯ ಗಣೇಶ್ ರಾವ್, ಪಟ್ಟಣ ಪಂಚಾಯತ್ ಮುಖಂಡ ಗೋಪಾಲ ಗಾಣಿಗ, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!