ಕಾಪು ಮಹಿಳಾ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣ: ಆರೋಪಿ ಪತಿ ಬಂಧನ

ಕಾಪು, ಮಾ.31: ಕಾಪು ಪೊಲೀಸ್ ಠಾಣೆಯ ಮಹಿಳಾ ಸಿಬಂದಿ ಜ್ಯೋತಿ(32) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪತಿಯನ್ನು ಆತ್ಮಹತ್ಯೆಗೆ ದುಷ್ಪ್ರೇರಣೆ ನೀಡಿದ ಆರೋಪದಡಿ ಕಾಪು ಪೊಲೀಸರು ಮಾ.30ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ರವಿ ಕುಮಾರ್(35) ಬಂಧಿತ ಆರೋಪಿ.

ಈತ ಕೆಎಸ್‌ಆರ್‌ಟಿಸಿಯಲ್ಲಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2017ರಲ್ಲಿ ತನ್ನದೇ ಊರಿನ ಜ್ಯೋತಿಯನ್ನು ಮದುವೆಯಾಗಿದ್ದನು. ಜ್ಯೋತಿ ಕಾಪು ಠಾಣಾ ಸಿಬ್ಬಂದಿಯಾಗಿರುವುದರಿಂದ ಇವರಿಬ್ಬರು ಠಾಣಾ ಸಮೀಪದಲ್ಲೇ ಇರುವ ಪೊಲೀಸ್ ವಸತಿಗೃಹದಲ್ಲಿ ವಾಸವಾಗಿದ್ದರು.

ಜ್ಯೋತಿ ಆತ್ಮಹತ್ಯೆ ಮಾಡಿಕೊಂಡ ರೂಮಿನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ತನ್ನ ಗಂಡನ ಅನುಮಾನವೇ ಕಾರಣ ಎಂದು ಬರೆದಿರುವುದಾಗಿ ಆಕೆಯ ತಾಯಿ ದೇವಮ್ಮ ವಿಟ್ಲಾಪುರ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ 306, 498(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿ, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!