ವಿಕಸಿತ ಭಾರತ,ಬಡತನ ಕಡಿಮೆ ಮಾಡಲು ಈ ಬಾರಿ 400ಕ್ಕಿಂತಲೂ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಿ- ಪ್ರಧಾನಿ ಮೋದಿ

ಶಿವಮೊಗ್ಗ: ನಗರದಲ್ಲಿ ಸೇರಿರುವ ಜನರನ್ನು ನೋಡಿದರೆ, ಇಂಡಿಯಾ ಒಕ್ಕೂಟದ ಜಂಗಾಬಲವೇ ಉಡುಗಿ ಹೋಗುವಂತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ಆಯೋಜಿಸಲಾಗಿದ್ದ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ವಿಕಸಿತ ಕರ್ನಾಟಕ, ವಿಕಸಿತ ಭಾರತ, ಬಡತನ ಕಡಿಮೆ ಮಾಡಲು ಈ ಬಾರಿ 400ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮೋದಿ ಮನವಿ ಮಾಡಿದರು.

ಶಿವಮೊಗ್ಗದ ಜನತೆಗೆ ನನ್ನ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಿಗಂದೂರು ಚೌಡೇಶ್ವರಿ ದೇವಿಗೆ ನಮನ ಸಲ್ಲಿಸಿದರು. ಶಿವಮೊಗ್ಗ ಯಾರಿಗೂ ಗೊತ್ತಿಲ್ಲದ ಪ್ರದೇಶವಾಗಿದ್ದು. ಪಂಚಾಯತ್, ಜಿಲ್ಲಾ ಪಂಚಾಯತ್‌ನಲ್ಲೂ ನಮಗೆ ಅಭ್ಯರ್ಥಿಗಳಿರಲಿಲ್ಲ. ಆದರೆ ಬಿಎಸ್ ಯಡಿಯೂರಪ್ಪ ಇಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದರು. ಇದೀಗ ಶಿವಮೊಗ್ಗ ದೇಶದ ಪ್ರಮುಖ ಭೂಪಟವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಾಂಗ್ರೆಸ್‌ಗೆ ಪ್ರತಿ ದಿನ ಬೆಳಗ್ಗೆ ಎದ್ದು ಸುಳ್ಳು ಹೇಳುವುದೇ ಅವರ ಕಾರ್ಯವಾಗಿದೆ. ಸಿಕ್ಕಿಬಿದ್ದರೆ ಇನ್ನೊಬ್ಬರ ಮೇಲೆ ಹಾಕುವುದು ಕಾಂಗ್ರೆಸ್ ಪದ್ಧತಿಯಾಗಿದೆ. ಇಲ್ಲಿ ಸಿಎಂ ಕುರ್ಚಿಗೆ ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಸಿಎಂ, ಮತ್ತೊಬ್ಬರು ಸಿಎಂ ಕುರ್ಚಿಗಾಗಿ ಕಾಯುತ್ತಿದ್ದಾರೆ. ಇನ್ನೊಬ್ಬರು ಸೂಪರ್ ಸಿಎಂ, ಮತ್ತೊಬ್ಬರು ಶ್ಯಾಡೋ ಸಿಎಂ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕರ್ನಾಟಕದ ಜನತೆ ಆಕ್ರೋಶ ನಾನು ಗಮನಿಸಿದ್ದೇನೆ. ಕರ್ನಾಟಕದಲ್ಲಿ ಲೋಕಸಭೆಯ ಪ್ರತಿ ಸ್ಥಾನದಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ನಮ್ಮ ಸಂಸದರು ಕೇಂದ್ರದ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಾರೆ. ಮುಂಬೈನ ಮೈದಾನದಲ್ಲಿ ಇಂಡಿಯಾ ಒಕ್ಕೂಟ ಒಂದಾಗಿತ್ತು. ಈ ವೇಳೆ ಹಿಂದೂ ಧರ್ಮದ ಶಕ್ತಿಯನ್ನು ಮುಗಿಸುವ ಘೋಷಣೆ ಮಾಡಿದ್ದಾರೆ. ಹಿಂದೂ ಸಮುದಾಯ ಶಕ್ತಿಯನ್ನು ಮುಗಿಸುವ ಶಪಥ ಮಾಡಿರುವ ಈ ನಾಯಕರಿಗೆ, ಅದೇ ಶಕ್ತಿ ಪರಿಣಾಮ ಗೊತ್ತಾಗಲಿದೆ ಎಂದು ಹೇಳಿದ್ದಾರೆ.

ನಾನು ರಾಜಕಾರಣಕ್ಕೆ ಬಂದಾಗ ಹಿಂದೂ ಸಮುದಾಯದ ದೇವತಾ ಶಕ್ತಿ ನನಗೆ ಪ್ರೇರಣೆ ನೀಡಿದೆ. ಕೋಟಿ ಕೋಟಿ ಜನರು ಇದೇ ಶಕ್ತಿಯ ಪ್ರೇರಣೆ, ಸ್ಪೂರ್ತಿ ಪಡೆದು ಮುನ್ನಡೆಯುತ್ತಿದ್ದಾರೆ. ಶಿವಾಜಿ ಪಾರ್ಕ್‌ನಲ್ಲಿ ಈ ಮಾತು ಹೇಳಿದ್ದಾರೆ. ಶಿವಾಜಿ ಮಹಾರಾಜ್ ಜೈ ಎಂದು ಹೇಳುವ, ಶಿವಾಜಿ ಹುಟ್ಟಿದ ನಾಡಲ್ಲೇ ಹಿಂದೂ ಶಕ್ತಿಯನ್ನು ಮುಗಿಸಲು ಇಂಡಿಯಾ ಒಕ್ಕೂಟ ಶಪಥ ಮಾಡಿದೆ ಎಂದು ಕಾಂಗ್ರೆಸ್ ವಿರುದ್ದ ಹರಿಹಾಯ್ದಿದ್ದಾರೆ.

ರಾಷ್ಟ್ರಕವಿ ಕುವೆಂಪು ಶಕ್ತಿ ಕುರಿತು ಮಹತ್ವದ ವಿಚಾರ ಹೇಳಿದ್ದಾರೆ. ಕುವೆಂಪು ಮಂತ್ರಕಣ, ಶಕ್ತಿ ಕಣ, ತಾಯಿ ದೇವಿ ಕಣ ಎಂದಿದ್ದಾರೆ. ಕುವೆಂಪು ಮಾತೆಯರಿಗೂ, ದೇವತೆಗೂ ಶಕ್ತಿ ಕಣ ಎಂದು ಉಲ್ಲೇಖಿಸಿದ್ದಾರೆ. ಆದರೆ ಭಾರತದ ಮಾತಾ ಶಕ್ತಿ ಇಂಡಿಯಾ ಒಕ್ಕೂಟಕ್ಕೆ ಸಹಿಸಲು ಸಾಧ್ಯವಾಗುತ್ತಿಲ್ಲ. ನಾರಿ ಶಕ್ತಿ, ಮಾ ಭಾರತ್ ಮಾತಾ ಶಕ್ತಿಯನ್ನು ಕಾಂಗ್ರೆಸ್ ಕಡೆಗಣಿಸಿದೆ ಎಂದು ಹೇಳಿದರು.

ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ವೇಳೆ ಹಕ್ಕಿ ಪಿಕ್ಕಿ ಸಮುದಾಯದ ಜೊತೆ ಮಾತನಾಡಿದ್ದೆ. ಪ್ರತಿ ವಂಚಿತ ಸಮುದಾಯದ ಏಳಿಗೆಗೆ ಬಿಜೆಪಿ ಕೆಲಸ ಮಾಡಲಿದೆ. ಎಸ್‌ಸಿ ಎಸ್‌ಎಸ್‌ಟಿ ಸಮುದಾಯದ ಮಹಿಳೆಯನ್ನು ರಾಷ್ಟ್ರಪತಿ ಮಾಡಿದೆ. ಇದೀಗ ವಿಶ್ವವೇ ಭಾರತದ ಆಧುನಿಕ ಮೂಲಭೌತ ಸೌಕರ್ಯದ ಕುರಿತು ಚರ್ಚೆ ಮಾಡುತ್ತಿದೆ. ವಂದೇ ಭಾರತ್, ಮೆಟ್ರೋ, ಅಂಡರ್ ವಾಟರ್ ಮೆಟ್ರೋ, ಹೈ ಸ್ಪೀಡ್ ಇಂಟರ್ನೆಟ್, ಪ್ರತಿ ಗಾಮದಲ್ಲಿ ಯುಪಿಐ ಪಾವತಿ, ಗ್ರೀನ್ ಕಾರಿಡಾರ್, ಎಕ್ಸ್‌ಪ್ರೆಸ್‌ವೇ ಮೂಲಕ ಇದೀಗ ಭಾರತ ವಿಶ್ವಪಟದಲ್ಲಿ ಗುರುತಿಸಿಕೊಂಡಿದೆ. ತುಮಕೂರು ಬೆಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಶಿವಮೊಗ್ಗದಿಂದ ಬೆಂಗಳೂರು ತಲುಪವು ಸಮಯ 2ಗಂಟೆ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಎರಡು ರೈಲ್ವೇ ಸೇತುವೆ ನಿರ್ಮಾಣ ಮಾಡಲಾಗಿದೆ. ತಾಳಗುಪ್ಪ ರೈಲು ನಿಲ್ದಾಣವನ್ನು ಅಮೃತ ಸ್ಟೇಶನ್ ಆಗಿ ಅಭಿವೃದ್ಧಿ ಮಾಡಲಾಗಿದೆ. ಇದೇ ವೇಳೆ ಪ್ರತಿ ಅಭ್ಯರ್ಥಿಗಳ ಹೆಸರು ಉಲ್ಲೇಖಿಸಿ ಅಭೂತ ಪೂರ್ವ ಗೆಲವು ನೀಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ. ಪ್ರತಿ ಪೂಲಿಂಗ್ ಬೂತ್‌ನಲ್ಲಿ ಬಿಜೆಪಿಗೆ ಗೆಲುವು ಸಿಗಬೇಕು ಎಂದು ಹೇಳಿದ್ದಾರೆ.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ,ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಬಿಜೆಪಿ ಲೋಕಸಭಾ ಅಭ್ಯರ್ಥಿಗಳಾದ ಬಿ.ವೈ ರಾಘವೇಂದ್ರ, ಕೋಟಾ ಶ್ರೀನಿವಾಸ್ ಪೂಜಾರಿ, ಗಾಯಿತ್ರಿ ಸಿದ್ದೇಶ್ವರ್, ಡಾ.ಸಿ.ಎನ್ ಮಂಜುನಾಥ್, ಬ್ರಿಜೇಶ್ ಚೌಟ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ, ಶಾಸಕ ವಿ.ಸುನೀಲ್ ಕುಮಾರ್, ಮಾಜಿ ಸಚಿವ ಕುಮಾರ್ ಬಂಗಾರಪ್ಪ, ಶಾಸಕ ಎಸ್. ಎನ್ ಚನ್ನಬಸಪ್ಪ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

error: Content is protected !!