‘2047ರ ಹೊತ್ತಿಗೆ ವಿಕಸಿತ ಭಾರತ’ ಗುರಿ: ಪ್ರಧಾನಿ ನೇತೃತ್ವದಲ್ಲಿ ಸಚಿವರ ಮಹತ್ವದ ಸಭೆ

ನವದೆಹಲಿ: ‘2047ರ ಹೊತ್ತಿಗೆ ವಿಕಸಿತ ಭಾರತ’ ಗುರಿ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿರಿಸಿದ್ದು, ಈ ನಿಟ್ಟಿನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಂತ್ರಿಮಂಡಲದ ಒಂದು ದಿನದ ಮಹತ್ವದ ಸಭೆ ನಡೆಯಿತು.

ಮುಂಬರುವ ಮೇ ತಿಂಗಳಲ್ಲಿ ಹೊಸ ಸರ್ಕಾರ ರಚನೆಯಾದ ನಂತರ ‘2047ರ ಹೊತ್ತಿಗೆ ವಿಕಸಿತ ಭಾರತ’ ಗುರಿ ಸಾಧಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ತಕ್ಷಣದ ಕ್ರಮಗಳಿಗಾಗಿ 100 ದಿನಗಳ ಕಾರ್ಯಸೂಚಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಏನು ಮಾಡಬೇಕು? ಇದನ್ನು ಚರ್ಚಿಸಲೆಂದೇ ನರೇಂದ್ರ ಮೋದಿ ಅವರು ಭಾನುವಾರ ಸಚಿವರೊಂದಿಗೆ ಸಭೆ ನಡೆಸಿದ್ದು, ವಿಕಸಿತ ಭಾರತದ ಕಲ್ಪನೆ ಸಾಕಾರಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳು, ರೂಪಿಸಬೇಕಾದ ಯೋಜನೆಗಳ ಕುರಿತು ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ವಿಕಸಿತ ಭಾರತ ನಿರ್ಮಾಣಕ್ಕಾಗಿ ನರೇಂದ್ರ ಮೋದಿ ಅವರು ಸಭೆಯಲ್ಲಿ ವಿಷನ್‌ ಇಂಡಿಯಾ ಡಾಕ್ಯುಮೆಂಟ್‌ ಕೂಡ ರಿಲೀಸ್‌ ಮಾಡಿದ್ದಾರೆ. 25 ವರ್ಷಗಳ ದೂರದೃಷ್ಟಿಯ ಕನಸು ನನಸಾಗಿಸುವ ದಿಸೆಯಲ್ಲಿ ಮುಂದಿನ 5 ವರ್ಷಗಳಲ್ಲಿ ಕೈಗೊಳ್ಳಬಹುದಾದ ಯೋಜನೆಗಳು, ದೇಶದ ಜನರ ಏಳಿಗೆ, ಸುಸ್ಥಿರ ಆರ್ಥಿಕತೆ ನಿರ್ಮಾಣ, ಉದ್ಯೋಗ ಸೃಷ್ಟಿ, ನಾವೀನ್ಯತೆ, ತಂತ್ರಜ್ಞಾನದ ಅಳವಡಿಕೆ ಸೇರಿ ಹಲವು ವಿಷಯಗಳ ಕುರಿತು ನರೇಂದ್ರ ಮೋದಿ ಅವರು ಮಾತನಾಡಿದ್ದು, ಸಚಿವರ ಅಭಿಪ್ರಾಯವನ್ನೂ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಕಸಿತ ಭಾರತ ನಿರ್ಮಾಣದ ದೂರದೃಷ್ಟಿಯ ಸಾಕಾರಕ್ಕಾಗಿ 2021ರ ಡಿಸೆಂಬರ್‌ನಿಂದ 2024ರ ಜನವರಿ ಅವಧಿಯಲ್ಲಿ ದೇಶಾದ್ಯಂತ ಸುಮಾರು 2,700 ಸಭೆ ನಡೆಸಲಾಗಿದೆ. ಅಷ್ಟೇ ಅಲ್ಲ, ತಜ್ಞರು, ಪರಿಣತರು ಮಾಡಿದ 450 ಶಿಫಾರಸುಗಳನ್ನು ಪರಿಶೀಲಿಸಿದ ಬಳಿಕ ವಿಷನ್‌ ಇಂಡಿಯಾ ಡಾಕ್ಯುಮೆಂಟ್‌ ತಯಾರಿಸಲಾಗಿದೆ. ಇದರಲ್ಲಿ ಭಾರತದ ಅಭಿವೃದ್ಧಿಯ ಸ್ಪಷ್ಟ ಚಿತ್ರಣ ಇದೆ ಎನ್ನಲಾಗಿದೆ. ಸಭೆಯಲ್ಲಿ ಸಚಿವರು, ಆಯಾ ಇಲಾಖೆಗಳ ಕಾರ್ಯದರ್ಶಿಗಳು ಕೂಡ ಭಾಗಿಯಾಗಿದ್ದರು ಎನ್ನಲಾಗಿದೆ.

ವಿಕಸಿತ ಭಾರತಕ್ಕೆ ಯೋಜನೆಗಳೇನು?

ದೇಶದ ಏಳಿಗೆ ದೃಷ್ಟಿಯಿಂದ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದ್ದು, ಇದಕ್ಕಾಗಿ 1ಲಕ್ಷ ಕೋಟಿ ರೂ. ಮೀಸಲಿಡುವುದು. ಸರ್ಕಾರದ ಹಣ ವ್ಯಯವಾಗದಂತೆ ತಡೆಯುವುದು. ಯುವಕರ ಕೌಶಲ ಅಭಿವೃದ್ಧಿ, ಪ್ರತಿಯೊಂದು ಕ್ಷೇತ್ರದಲ್ಲೂ ನಾವೀನ್ಯತೆಯ ಅಳವಡಿಕೆ. ಯುವಕರ ಸಂಖ್ಯೆ ಹೆಚ್ಚಳ, ವಯಸ್ಸಾದವರ ಸಹಭಾಗಿತ್ವ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆ, ಆರ್ಥಿಕತೆಯ ಸ್ಥಿರತೆ ಕಾಪಾಡುವುದು, ರೈತರು, ಬಡವರ ಏಳಿಗೆಯ ದಿಸೆಯಲ್ಲಿ ಯೋಜನೆಗಳನ್ನು ರೂಪಿಸುವುದು ಸೇರಿ ಹಲವು ಕ್ರಿಯಾಯೋಜನೆ ಗಳನ್ನು ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಹೇಳಿದ್ದೇನು?

ಸಚಿವರೊಂದಿಗೆ ನಡೆಸಿದ ಸಭೆಯಲ್ಲಿ, ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದು, ಅಭಿವೃದ್ಧಿಯನ್ನು ಉತ್ತೇಜಿಸಲು ಮತ್ತು ಸಮಾಜದ ಎಲ್ಲಾ ವರ್ಗಗಳ ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ತಮ್ಮ ಸರ್ಕಾರ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಮಾತನಾಡಿದರು. ‘ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಇದರ ಬಗ್ಗೆ ಯಾವುದೇ ಚಿಂತೆ ಬೇಡ. ಚುನಾವಣೆ ಬಳಿಕ ನಾವು ಮತ್ತೆ ಸಿಗೋಣ. ಆದರೆ, ಚುನಾವಣೆ ಸಂದರ್ಭದಲ್ಲಿ ಯಾರೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು. ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಬೇಕು. ಮುಂದಿನ 100 ದಿನಗಳು ಪ್ರಮುಖವಾಗಿವೆ.ನಾವು ಗೆದ್ದ ನಂತರ ಮತ್ತೆ ಭೇಟಿಯಾಗುತ್ತೇವೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!