ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಫೆ.17ರಂದು ಬಸವಣ್ಣನವರ ಭಾವಚಿತ್ರ: ಸಿಎಂ ಸಿದ್ದರಾಮಯ್ಯ ಆದೇಶ

ಬೆಂಗಳೂರು: 12 ನೇ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ, ವಿಶ್ವಮಾನವತಾವಾದಿ ಜಗಜ್ಯೋತಿ ಬಸವಣ್ಣನವರ ಭಾವಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಫೆಬ್ರವರಿ 17ರಂದು ಹಾಕುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಸವಣ್ಣ ಭಾವಚಿತ್ರ ಅನಾವರಣಗೊಳಿಸಿ ಮಾತನಾಡಿದ ಅವರು, ಬಸವಣ್ಣನವರ ಭಾವಚಿತ್ರದಲ್ಲಿ ‘ವಿಶ್ವ ಗುರು ಬಸವಣ್ಣ -ಸಾಂಸ್ಕೃತಿಕ ನಾಯಕ’ ಎಂದು ನಮೂದಿಸಲು ಸೂಚನೆ ನೀಡಲಾಗಿದೆ. ಮನುಷ್ಯ ಮನುಷ್ಯನನ್ನು ಪ್ರೀತಿಸಿದರೆ ಸದ್ಗುಣ. ಮನುಷ್ಯ ಮನುಷ್ಯರನ್ನು ದ್ವೇಷಿಸಿದರೆ ದುರ್ಗುಣ ಎಂದು ಹೇಳಿದರು. ನಾನೇನು ಕುರುಬ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದ್ದೆನಾ? ನಾನು ಹುಟ್ಟಿದ್ದೇನೆ, ಜಾತಿ ವ್ಯವಸ್ಥೆ ಇದೆ. ಕರ್ಮ ಅನ್ನೋದು ಪಟ್ಟಭದ್ರ ಹಿತಾಸಕ್ತಿಗಳು ಮಾಡಿದ್ದು. ಬಸವಣ್ಣನವರ ಕಾರ್ಯಕ್ರಮಕ್ಕೆ ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಹೇಳುವುದೇ ಇಲ್ಲ ಎಂದರು.

ನಾಲ್ಕು ಮಂದಿಯನ್ನು ಭಾರತ ಮರೆಯಲು ಸಾಧ್ಯವಿಲ್ಲ: ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯವರನ್ನು ಭಾರತ ದೇಶ ಮರೆಯಲು ಸಾಧ್ಯವೇ ಇಲ್ಲ. ಇವರೆಲ್ಲ ಸಮಾಜದಲ್ಲಿರುವ ಅಂಕು ಡೊಂಕು ತಿದ್ದಿದವರು. ಸಮಾಜದ ಬದಲಾವಣೆಗಾಗಿ ಅಸಮಾನತೆ ಹೋಗಬೇಕು ಎಂದು ಆಶಿಸಿದರು. 

ಬಸವಣ್ಣನವರ ಅನುಭವ ಮಂಟಪ ಮಾದರಿ: ಸಂಸದೀಯ ವ್ಯವಸ್ಥೆ ನಮ್ಮಿಂದ ಬಂತು ಎಂದು ಬ್ರಿಟಿಷರು ಹೇಳುತ್ತಾರೆ. ಆದರೆ ಅದು ನಮ್ಮ ಬಸವಣ್ಣನವರ ಕಾಲದಲ್ಲೇ ಬಂದಿದೆ. ಅನುಭವ ಮಂಟಪದ ಮೂಲಕ ಸಂಸದೀಯ ವ್ಯವಸ್ಥೆ ತಂದಿದ್ದಾರೆ. ನಾವೀಗ ಸಂಸತ್ತು ಅಂತ ಯಾವುದನ್ನು ಹೇಳುತ್ತೇವೆಯೋ, ಆಗಲೇ ಜನರ ಧ್ವನಿ ಎತ್ತಲು ಬಸವಣ್ಣ ಅನುಭವ ಮಂಟಪವನ್ನು ಮಾಡಿದ್ದರು. ಮಹಿಳೆಯರಿಗೆ ಸ್ವಾತಂತ್ರ್ಯ ಇರಲಿಲ್ಲ. ಮನುವಾದಿಗಳು ಕೆಲವು ಕೆಟ್ಟ ಸಂಪ್ರದಾಯಗಳನ್ನ ಮಾಡಿಬಿಟ್ಟಿದ್ದರು. ಇದರಿಂದ ಅಸಮಾನತೆ ಹುಟ್ಟು ಹಾಕಿದ್ದರು. 850 ವರ್ಷಗಳ ಹಿಂದೆಯೇ ಬಸವಣ್ಣವರು ಕಂದಾಚಾರವನ್ನು ಹೊಗಲಾಡಿಸಲು ಶ್ರಮಿಸಿದ್ದರು ಎಂದರು. 

Leave a Reply

Your email address will not be published. Required fields are marked *

error: Content is protected !!