ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯಗಳನ್ನು ನಿರ್ವಹಿಸಬೇಕು: ಉಪ ಲೋಕಾಯುಕ್ತ ನ್ಯಾ.ಕೆ. ಎನ್.ಫಣೀಂದ್ರ

ಉಡುಪಿ, ಫೆ.03: ಅಧಿಕಾರಿಗಳು ತಮ್ಮ ಜವಾಬ್ದಾರಿಯುತ ಕಾರ್ಯವನ್ನು ಅರಿತು ಪಾರದರ್ಶಕ, ಪ್ರಾಮಾಣಿಕ ಹಾಗೂ ನ್ಯಾಯಯುತವಾಗಿ ಸರ್ಕಾರದ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಗೌರವಾನ್ವಿತ ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಪ್ರತಿಯೊಬ್ಬ ನಾಗರಿಕರು ಗೌರವಯುತವಾಗಿ ಜೀವನ ನಡೆಸಬೇಕೆಂಬ ಆಶಯದೊಂದೊಗೆ ಸರಕಾರ ಸಂವಿಧಾನವನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಅನೇಕ ಕಾನೂನುಗಳು, ಯೋಜನೆಗಳು, ಕಾರ್ಯಕ್ರಮಗಳನ್ನು ಶಾಸಕಾಂಗ ರೂಪಿಸಿ, ಕಾರ್ಯಾಂಗಾದ ಮೂಲಕ ಅನುಷ್ಠಾನಗೊಳಿಸುತ್ತಿದೆ. ಇವುಗಳಲ್ಲಾಗುವ ಲೋಪಗಳನ್ನು ತಿದ್ದುವ ಕಾರ್ಯವನ್ನು ನ್ಯಾಯಾಂಗ ಮಾಡುತ್ತಿದೆ ಎಂದರು.
ಮನುಷ್ಯ ಹುಟ್ಟಿನಿಂದ ಸಾಯುವವರೆಗೆ ಗೌರವಯುತವಾಗಿ ಜೀವನ ನಡೆಸಲು ಸಂವಿಧಾನದಲ್ಲಿ ಹಕ್ಕುಗಳಲ್ಲಿ ನೀಡಲಾಗಿದೆ. ಶಾಸಕಾಂಗ ಹಾಗೂ ಕಾರ್ಯಾಂಗದ ವ್ಯವಸ್ಥೆಯಲ್ಲಿ ಲೋಪದೋಷ ಉಂಟಾದ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದಿದಾಗೆ ಅದನ್ನು ಸರಿಪಡಿಸಿ, ಸಮಸ್ಯೆ ಪರಿಹಾರ ಮಾಡಲು ಲೋಕಪಾಲ್ ಹಾಗೂ ಲೋಕಾಯುಕ್ತ ಸಂಸ್ಥೆಯನ್ನು ಅನುಷ್ಠಾನ ಮಾಡಲಾಗಿದೆ. ಕಾನೂನು ವಿರುದ್ಧವಾಗಿ ಕೆಲಸ ಮಾಡುವುದು, ಸರಿಯಾದ ಕೆಲಸವನ್ನು ಸಂದರ್ಭೋಚಿತವಾಗಿ ಮಾಡದಿರುವುದು ಹಾಗೂ ಕಾನೂನಾತ್ಮಕವಾಗಿ ಮಾಡಬೇಕಾದ ಕೆಲಸವನ್ನು ಮಾಡದೇ ಕರ್ತವ್ಯ ವಿಮುಖರಾಗುವವರ ವಿರುದ್ಧ ಲೋಕಾಯುಕ್ತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಾರ್ವಜನಿಕರು ನ್ಯಾಯಾಲಯಕ್ಕೆ ಸಂಬAಧಿಸಿದ ಪ್ರಕರಣಗಳಲ್ಲಿ ಉಚಿತ ಕಾನೂನು ಸಲಹೆ ಪಡೆಯಲು ಜಿಲ್ಲಾ ಕಾನೂನು ಪ್ರಾಧಿಕಾರವನ್ನು ಸಂಪರ್ಕಿಸಿ, ಮಾಹಿತಿ ಪಡೆದುಕೊಳ್ಳಬಹುದು ಎಂದ ಅವರು, ಬಡತನ ರೇಖೆಗಿಂತ ಕೆಳಗಿನವರು, ಲಂಚ ನೀಡದೇ ಇರುವವರು, ಬೇರೆಯವರ ಪ್ರಭಾವ ಬಳಸಿ ಕೆಲಸ ಮಾಡಿಕೊಳ್ಳದೇ ಇರುವವರು, ಹಕ್ಕಿನ ಮೂಲಕ ಹೋರಾಡಿ ಸೈದ್ಧಾಂತಿಕ ಜೀವನ ನಡೆಸುತ್ತಿರುವವರು ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತಿದ್ದಾರೆ. ಇವುಗಳ ಮೇಲೆ ಕ್ರಮಗಳಾಗುತ್ತಿದೆ. ಒಂದು ವೇಳೆ ನಿಷ್ಠೆಯಿಂದ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಅನಾವಶ್ಯಕವಾಗಿ ಸುಳ್ಳು ದೂರುಗಳನ್ನು ಸಲ್ಲಿಸಿದರೆ, ಸೆಕ್ಷನ್ 17 ಮತ್ತು 19 ಅಡಿಯಲ್ಲಿ ಸುಳ್ಳು ದೂರು ಸಲ್ಲಿಸುವವರಿಗೂ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಲೋಕಾಯುಕ್ತ ಸಂಸ್ಥೆಗೆ ಅವಕಾಶವಿದೆ ಎಂದರು.

ಅಧಿಕಾರಿಗಳು ಕರ್ತವ್ಯಲೋಪ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಕರ್ತವ್ಯ ಲೋಪದ ಕುರಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈ ರೀತಿಯ ಕಾರ್ಯಕ್ರಮದ ಮೂಲಕ ಸಾರ್ವಜನಿಕರ ಹಕ್ಕುಗಳನ್ನು ಸಂರಕ್ಷಿಸುವುದರೊಂದಿಗೆ ಅವರುಗಳಿಗೆ ನಿಷ್ಪಕ್ಷಪಾತವಾಗಿ ಶೀಘ್ರವಾಗಿ ನ್ಯಾಯ ಒದಗಿಸಿ ಕೊಡಲು ನಮ್ಮ ಸಂಸ್ಥೆ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಕಾರ್ಯವ್ಯಾಪ್ತಿ, ಸಂಸ್ಥೆಯ ಕೆಲಸ, ಸಂಸ್ಥೆಯಲ್ಲಿ ಯಾವ ರೀತಿಯ ದೂರುಗಳ ವಿಚಾರಣೆ ನಡೆಯುತ್ತದೆ ಹಾಗೂ ಯಾವ ರೀತಿಯ ಪ್ರತಿಬಂಧಕ ಗಳಿವೆ ಎಂಬುದರ ಬಗ್ಗೆ ಅರಿವು ಮೂಡಿಸಲು ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಾದ್ಯಂತ ಅತ್ಯಂತ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಲೋಕಾಯುಕ್ತ. ಜಿಲ್ಲೆಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಪ ಲೋಕಾಯುಕ್ತರು ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಆಯೋಜಿಸಿದ್ದು, ಸಾರ್ವಜನಿಕರು ಮುಕ್ತವಾಗಿ ತಮ್ಮ ಸಮಸ್ಯೆಗಳನ್ನು ತಿಳಿಸಿ, ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ ಎಂದರು.
ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದಂತೆ ದೂರುಗಳು ಬಂದಾಗ ಧನಾತ್ಮಕವಾಗಿ ಸ್ಪಂದಿಸಿ, ಸಮಸ್ಯೆಗಳನ್ನು ಕಾನೂನು ವ್ಯಾಪ್ತಿಯಲ್ಲಿ ಇತ್ಯರ್ಥ ಪಡಿಸಲು ಮುಂದಾಗಬೇಕು ಎಂದ ಅವರು, ಸಾರ್ವಜನಿಕರು ಯಾವ ಉದ್ದೇಶಗಳಿಗಾಗಿ ಕಚೇರಿಗೆ ಬಂದಿದ್ದಾರೆ ಎಂದು ಅರ್ಥೈಸಿಕೊಂಡು ಸಕಾರಾತ್ಮಕವಾಗಿ ಅವರಿಗೆ ಸ್ಪಂದಿಸಿ, ಬೆಂಬಲ ನೀಡಬೇಕು. ಸಾರ್ವಜನಿಕರು ಯಾವುದೇ ದೂರುಗಳಿದ್ದಲ್ಲಿ ಆತಂಕ ರಹಿತವಾಗಿ ಮುಕ್ತವಾಗಿ ಸಲ್ಲಿಸಿ, ತಮ್ಮ ಸಮಸ್ಯೆಗಳನ್ನು ಈ ದಿನ ಬಗೆಹರಿಸಿಕೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ರಾಜ್ಯ ಲೋಕಾಯುಕ್ತ ವಿಚಾರಣೆಗಳ ಉಪನಿಬಂಧಕ ಎಂ.ವಿ.ಚೆನ್ನಕೇಶವ ರೆಡ್ಡಿ, ಲೋಕಾಯುಕ್ತ ವಿಚಾರಣೆ 01 ರ ಉಪನಿಬಂಧಕ ಹಾಗೂ ವಿಚಾರಣೆಗಳು- 02 ರ ಪ್ರಭಾರ ಸಹಾಯಕ ನಿಬಂಧಕ ರಂಗೇಗೌಡ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ. ಪಾಟೀಲ್, ಕುಂದಾಪುರ ಡಿಸಿಎಫ್ ಗಣಪತಿ, ಕಾರ್ಕಳ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಮ್ ಬಾಬು, ಲೋಕಾಯುಕ್ತ ಮಂಗಳೂರು ವಿಭಾಗದ ಅಧೀಕ್ಷಕ ಸಿ.ಎ ಸೈಮನ್, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್ ಸ್ವಾಗತಿಸಿದರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ನಿರೂಪಿದರು. ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ-48, ಗ್ರಾಮೀಣ ಅಭಿವೃದ್ಧಿ ಇಲಾಖೆಯ-29, ಸ್ಥಳೀಯ ಸಂಸ್ಥೆಯ -9, ಮೆಸ್ಕಾಂನ -2, ಧಾರ್ಮಿಕ ದತ್ತಿ ಇಲಾಖೆಯ -4, ಗೃಹ ಮಂಡಳಿಯ -11, ಸಹಕಾರಿ ಇಲಾಖೆಯ-3, ಭೂ ಮಾಪನ ಇಲಾಖೆಯ -7, ಪೊಲೀಸ್ ಇಲಾಖೆಯ-8, ಆರೋಗ್ಯ ಇಲಾಖೆಯ-5, ನೋಂದಣಿ ಇಲಾಖೆಯ -2, ಅರಣ್ಯ ಇಲಾಖೆಯ-2, ಗಣಿ ಇಲಾಖೆಯ -4, ಆರ್.ಟಿ.ಓ ದ -3, ನಗರಾಭಿವೃದ್ಧಿ ಇಲಾಖೆಯ-2, ಪಿ.ಡಬ್ಲ್ಯೂ. ಡಿ ಯ-2, ಶಿಕ್ಷಣ ಇಲಾಖೆಯ-3, ಸಾರಿಗೆ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರದ, ಕಾರ್ಮಿಕ ಇಲಾಖೆ, ಕೆ.ಪಿ.ಟಿ.ಸಿ.ಎಲ್, ಕೆ.ಆರ್.ಡಿ.ಎಲ್, ಕೆ.ಎಸ್.ಆರ್.ಟಿ.ಸಿ ಯ, ನೀರಾವರಿ ಇಲಾಖೆಯ, ರಾಷ್ಟಿçÃಯ ಹೆದ್ದಾರಿ, ಕೆನರಾ ಬ್ಯಾಂಕ್ ಹಾಗೂ ನಿರ್ಮಿತಿ ಕೇಂದ್ರದ ತಲಾ 1 ಅರ್ಜಿಗಳು ಸೇರಿದಂತೆ ಒಟ್ಟು 154 ಅರ್ಜಿಗಳು ಬಂದಿದ್ದು ಅವುಗಳಲ್ಲಿ 72 ಅರ್ಜಿಗಳನ್ನು ವಿಚಾರಣೆ ಮಾಡಲಾಗಿದೆ ಬಾಕಿ ಉಳಿದ ಅರ್ಜಿಗಳನ್ನು ಸೋಮವಾರ ವಿಚಾರಣೆ ನಡೆಯಲಿದೆ.

Leave a Reply

Your email address will not be published. Required fields are marked *

error: Content is protected !!