ಉಡುಪಿ: ಜ.23-24 ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ‘ಸಂಸ್ಕೃತಿ ಉತ್ಸವ- 2024’
![](https://udupitimes.com/wp-content/uploads/2024/01/Screenshot_2024-01-20-12-12-43-17_99c04817c0de5652397fc8b56c3b3817-1024x420.jpg)
ಉಡುಪಿ: ಕರಾವಳಿ ಕರ್ನಾಟಕದ ಪ್ರಸಿದ್ಧ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯು ಇದೇ ಬರುವ ಜನವರಿ 23 ಮತ್ತು 24ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಸಂಸ್ಕೃತಿ ಉತ್ಸವವನ್ನು ಆಯೋಜಿಸುತ್ತಿದೆ.
ಉಡುಪಿಯ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ನಡೆಯಲಿದೆ.
ಈ ಉತ್ಸವದಲ್ಲಿ 23 ಮಂಗಳವಾರ ಸಂಜೆ 5:30ಕ್ಕೆ ಸರಿಯಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅವರು ಉದ್ಘಾಟನೆ ಮಾಡಲಿದ್ದು, ಸಮಾರಂಭದಲ್ಲಿ ಶ್ರೀ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಹೆಬ್ರಿ ಇವರ ಪ್ರಾಯೋಜಕತ್ವದಲ್ಲಿ ‘ಶಾರದಾ ಕೃಷ್ಣ ಪುರಸ್ಕಾರ 2024 ‘ ನ್ನು ಗಡಿನಾಡು ಕನ್ನಡದ ಪ್ರಸಿದ್ಧ ಕಲಾವಿದರಾದ ಕಾಸರಗೋಡು ಚಿನ್ನಾ ಅವರಿಗೆ ಪ್ರದಾನ ಮಾಡಲಾಗುವುದು.
ಎ.ಎಸ್.ಎನ್.ಹೆಬ್ಬಾರ್ ಅವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರೊ.ಎಂ.ಬಾಲಕೃಷ್ಣ ಶೆಟ್ಟಿ, ಡಾ. ಎಚ್.ಎಸ್. ಶೆಟ್ಟಿ, ಸದಾನಂದ ಶೆಣೆೈ ಹಾಗೂ ಸುಗುಣಾ ಸುವರ್ಣ ಅವರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಬೆಂಗಳೂರಿನ ಕಲಾವಿದ ತೇಜಸ್ವಿ ಅನಂತ್ ಅವರಿಂದ ಪಿಕ್ಸೆಲ್ ಪೋಯಿ, ಯೂನಿ ಸೈಕ್ಲಿಂಗ್, ಜಗಲಿಂಗ್ ಇವುಗಳ ವಿಶಿಷ್ಟ ಕಲಾ ಪ್ರದರ್ಶನ ನಡೆಯಲಿದೆ .
ಬುದವಾರ ಜನವರಿ 23ರಂದು ಸಂಜೆ 5: 30 ಕ್ಕೆ ಕನ್ನಡದ ಪ್ರಸಿದ್ಧ ಸಾಹಿತಿ ಜಯಂತ್ ಕಾಯ್ಕಿಣಿ ಅವರಿಗೆ ಶ್ರೀಮತಿ ಪ್ರಭಾವತಿ ಶ್ರೀ ಉಡುಪಿ ವಿಶ್ವನಾಥ ಶೆಣೆೈ ಪ್ರಯೋಜಿತ ವಿಶ್ವಪ್ರಭಾ ಪುರಸ್ಕಾರ 2024 ನ್ನು ಪ್ರದಾನ ಮಾಡಲಾಗುವುದು.
ಈ ಹಿಂದೆ ಇದೇ ಪುರಸ್ಕಾರವನ್ನು 2021 ರಲ್ಲಿ ಡಾ. ಮೋಹನ್ ಆಳ್ವ ,2022 ರಲ್ಲಿ ಗಿರೀಶ್ ಕಾಸರವಳ್ಳಿ, 2023ರಲ್ಲಿ ಡಾ. ಸಂಧ್ಯಾ ಪೈ ಅವರಿಗೆ ನೀಡಲಾಗಿತ್ತು.
ಹಿರಿಯ ವಿದ್ವಾಂಸ ನಾಡೋಜ ಪ್ರೊ.ಕೆ.ಪಿ.ರಾವ್ ಅವರ ಅಧ್ಯಕ್ಷತೆಯಲ್ಲಿ ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗಾಂಧಿ ಆಸ್ಪತ್ರೆ ಉಡುಪಿಯ ಆಡಳಿತ ನಿರ್ದೇಶಕ ಡಾ.ಹರೀಶ್ಚಂದ್ರ, ಮುಂಬೈಯ ಮನೋಹರ್ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಎರಡು ದಿನ ಉಡುಪಿ ಸೀರೆಗಳು, ಪುಸ್ತಕ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಮಾಡಲಾಗಿದೆ.
ಕಲಾಭಿಮಾನಿಗಳಿಗೆ, ಸಾಹಿತ್ಯ ಆಸಕ್ತರಿಗೆ ಉಚಿತ ಪ್ರವೇಶವಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ನಾಗರಾಜ್ ಹೆಬ್ಬಾರ್ ತಿಳಿಸಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ್ ಶೆಣಿೈ, ಅಧ್ಯಕ್ಷರಾದ ಪ್ರೊ. ಶಂಕರ್, ಉಪಾಧ್ಯಕ್ಷರಾದ ಸಂಧ್ಯಾ ಶೆಣೈ, ಸಂಚಾಲಕ ರವಿರಾಜ್ ಎಚ್.ಪಿ ಉಪಸ್ಥಿತರಿದ್ದರು.